ಅಕ್ಷರದವ್ವ, ದಣಿವರಿಯದ ಸತ್ಯಶೋಧಕಿ, ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೇ ಸಾವಿತ್ರಿಬಾಯಿ ಫುಲೆ

0
10
  • ಎಸ್. ವಿಜಯಕುಮಾರ ಸಿರವಾರ

“ಅಕ್ಷರದವ್ವ, ಶಿಕ್ಷಣ ಕ್ರಾಂತಿಯ ಮಹಾ ದೀಪ, ಮಹಿಳಾ ಸಬಲೀಕರಣದ ಹೋರಾಟಗಾರ್ತಿ, ಮಾತೆ ಸಾವಿತ್ರಿಭಾಯಿ ಫುಲೆ ಅವರ ಸಾಧನೆಯು ನಾವೆಂದೂ ಮರಿಯಲು ಅಸಾಧ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಭಾರತದ ಐತಿಹಾಸಿಕ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆಯಲಾಗಿದೆ. ಜನವರಿ 03 ದೇಶದ ಮಹತ್ವದ ದಿನವಾಗಿದೆ ಭಾರತ ಸರ್ಕಾರವು 2020 ರಂದು ಜನವರಿ 03 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಾತೆ ಸಾವಿತ್ರಬಾಯಿ ಫುಲೆ ಅವರ ಜಯಂತಿಯನ್ನು ಅಚರಿಸುವಂತೆ ಸರ್ಕಾರವು ಸುತ್ತೋಲೆ ಹೊರಡಿಸಿದೆ.

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿಪುಲೆ ಅವರ ಹುಟ್ಟಿಗೆ ನಿಜವಾದ ಅರ್ಥ ಸಿಕ್ಕಿದೆ, ”ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದನ್ನು ಬ್ರಿಟಿಷರಿಂದ ಪಡೆದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಸಾಧನೆಯನ್ನು ಸ್ವತಂತ್ರ ಭಾರತದ ಚರಿತ್ರೆ ರೂಪಿಸಿದ ಮನಸ್ಸುಗಳು ಅಂಚಿಗೆ ತಳ್ಳಿದ್ದು ಈ ದೇಶದ ಇತಿಹಾಸ ರಚನಾ ಕ್ರಮ ಯಾವ ಮೌಲ್ಯಗಳನ್ನು ಪ್ರತಿಪಾದಿಸುವ ಉದ್ದೇಶ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

Contact Your\'s Advertisement; 9902492681

”ಸಾವಿತ್ರಿ ಬಾಯಿಫುಲೆ 1831, ಜನವರಿ 3 ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದರು. ಆ ಕಾಲದ ಕಟ್ಟುಪಾಡುಗಳಂತೆ ಸ್ವತಃ ಬಾಲ್ಯವಿವಾಹ ಬಂಧನಕ್ಕೆ ಒಳಗಾಗಿ ತನ್ನ ಒಂಬತ್ತನೆ ವಯಸ್ಸಿನಲ್ಲಿ ಕೈ ಹಿಡಿದದ್ದು ಸಾಮಾಜಿಕ ಬದಲಾವಣೆಯ ಹರಿಕಾರರಾದ 12 ವರ್ಷ ವಯಸ್ಸಿನ ಜ್ಯೋತಿ ಬಾ ಫುಲೆ ಅವರನ್ನು ಆದರೆ ಆ ಘಟನೆ ಮಾತೆ ಸಾವಿತ್ರಿಬಾಯಿ ಫುಲೆ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಪ್ರೇರಣೆಯಾಯಿತು.

”19ನೇ ಶತಮಾನದಲ್ಲಿ ಭಾರತ ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಮನಸ್ಥಿತಿ ತಳಸಮುದಾಯದ ಜನರು ಮತ್ತು ಎಲ್ಲಾ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣವನ್ನು ನಿರಾಕರಿಸುತ್ತಿತ್ತು ಅದರ ವಿರುದ್ಧ ಹೋರಾಟಕ್ಕೆ ನಿಂತ ಅಕ್ಷರದವ್ವ ಸಾವಿತ್ರಿಬಾಯಿ ಅವರು 1848 ರ ಕಾಲದಲ್ಲಿಯೇ ಪುಣೆಯ ನಾರಾಯಣ ಪೇಟೆಯ ಬಿಂದೇವಾಡದಲ್ಲಿ ದೇಶದಲ್ಲಿ ಮೊದಲ ಬಾಲಕಿಯರ ಶಾಲೆ ತೆರೆದರು.

“ಸಾವಿತ್ರಿ ಬಾಯಿ ಅವರ ಈ ನಿರ್ಧಾರವನ್ನು ಆ ಕಾಲದ ಅತಾರ್ಕಿಕ ಜಾತಿ ಮನಸ್ಥಿತಿ ಹಾಸು ಹೊಕ್ಕಾಗಿದ್ದ ಕೆಲವು ಭಾರತೀಯ ಮನಸ್ಸುಗಳು ಹಿಂಸಾತ್ಮಕ ಪ್ರತಿರೋಧದ ಮೂಲಕ ಸೋಲಿಸಬೇಕು ಎಂಬ ಕಾರಣಕ್ಕೆ ಸಾವಿತ್ರಿಬಾಯಿ ಶಾಲೆಗೆ ಹೋಗುವಾಗ ಆಕೆಯ ಮೇಲೆ ಸೆಗಣಿ ಎರಚಲಾಯಿತು, ಹೀನಾಯವಾಗಿ ಅವಶ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಸಮಾಜ ವಿದ್ರೋಹಿ ಎಂಬ ಪಟ್ಟ ಕಟ್ಟಲಾಯಿತು. ಆಕೆಯ ಮೇಲೆ ಕಲ್ಲು, ಸಗಣಿ ಎಸೆಯಲಾಯಿತು. ಆದರೆ ಇದ್ಯಾವುದಕ್ಕೂ ಜಗ್ಗದ ಸಾವಿತ್ರಿಬಾಯಿಫುಲೆ ತನ್ನ ಕಾರ್ಯವನ್ನು ಮುಂದುವರಿಸಿದರು. ಶಾಲೆಗೆ ಬರುವಾಗ ತನ್ನ ಬ್ಯಾಗಿನಲ್ಲಿ ಒಂದು ಸೀರೆ ಇಟ್ಟುಕೊಂಡು ಬರುತ್ತಿದ್ದರು. ಶಾಲೆಗೆ ಬರುವಾಗ ಸೆಗಣಿ, ಕೆಸರು ಎರಚಿದ್ದ ಸೀರೆಯನ್ನು ಮಕ್ಕಳು ಬರುವುದಕ್ಕೆ ಮುಂಚೆ ಶಾಲೆಯಲ್ಲೇ ಬದಲಿಸಿ ಪಾಠ ಮಾಡುವುದಕ್ಕೆ ನಿಲ್ಲುತ್ತಿದ್ದರು.

” 1847ರಲ್ಲಿ ತಮ್ಮ 17 ನೇ ವಯಸ್ಸಿನಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದರು. ಸಾವಿತ್ರಿಬಾಯಿ ಅವರು ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ವಿರುದ್ಧವಾಗಿತ್ತು.

” 1851 ರ ಹೊತ್ತಿಗೆ ಬಾಲಕಿಯರಿಗೆ ಪುಲೆ ದಂಪತಿಗಳು ಮೂರು ಶಾಲೆಗಳನ್ನು ತೆರೆದರು. ಇದರಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು. ವಿಶೇಷವೆಂದರೆ ಕಡಿಮೆ ದಿನಗಳಲ್ಲಿ ಈ ಶಾಲೆಗಳು ಸರಕಾರಿ ಶಾಲೆಗಳಿಗಿಂತಲೂ ಹೆಚ್ಚಿನ ಖ್ಯಾತಿ ಪಡೆದವು. ವಿಶೇಷವೇನೆಂದರೆ ಈ ಶಾಲೆಗಳು ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಯಿತು. ಆದರೆ ಸಾವಿತ್ರಿಬಾಯಿ ಇಂತಹ ಸಮಾಜಪರ ಕಾರ್ಯಗಳು ಆಗಿನ ಸಂಪ್ರದಾಯವಾದಿಗಳಿಗೆ ಸಹಿಸಲಾರದ ತುತ್ತಾಗಿತ್ತು.

” ಸಾವಿತ್ರಿಬಾಯಿ ಫುಲೆ ಅವರು ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ ವಿಧವೆಯಾದ, ಆತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿದರು. ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಕೂಲಿಕಾರರಿಗಾಗಿ ರಾತ್ರಿ ಪಾಳಿಯ ಶಾಲೆಗಳನ್ನು ಆರಂಭಿಸಿದರು.

ದಲಿತ ಸಮುದಾಯದ ಜನರಿಗೆ ಸ್ವತಃ ತಮ್ಮ ಮನೆಯ ಬಾವಿಯನ್ನು ಬಿಟ್ಟುಕೊಟ್ಟು ಸಮಾನತೆಯ ತತ್ವವನ್ನು ಕ್ರಿಯೆಯಾಗಿ ನಿರೂಪಿಸಿದರು. ಮುಖ್ಯವಾಗಿ ಆ ಕಾಲದಲ್ಲಿಯೇ ಅಕ್ಷರ ಕಲಿಯಲು ಆರ್ಥಿಕ ಸಮಸ್ಯೆ ಇದ್ದ ಮಕ್ಕಳಿಗೆ ಶಿಷ್ಯವೇತನವನ್ನು ಕೊಡುವ ಕೆಲಸವನ್ನು ಸಾವಿತ್ರಿಬಾಯಿ ನಡೆಸುತ್ತಿದ್ದ ಶಾಲೆಗಳು ನಿರ್ವಹಿಸುತ್ತಿದ್ದವು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತದಲ್ಲಿ ನಿಧಾನವಾಗಿ ಶಿಕ್ಷಣದ ಮಹತ್ವ ತಳಸಮುದಾಯದ ಜನರ ಅರಿವಿನ ಭಾಗವಾಗಿ ಬೆಳೆದು ಅಕ್ಷರದವ್ವ ಕಟ್ಟಿದ ಚಳವಳಿ ದೇಶದ ತುಂಬ ವ್ಯಾಪಿಸತೊಡಗಿತು.

“ಅಕ್ಷರ ಮಾತೆ ಕಟ್ಟಿದ ಪ್ರಜ್ಞೆಯ ಮುಂದುವರಿದ ಭಾಗವಾಗಿ 1874 ರ ಕಾಲದಲ್ಲೇ ಮೊದಲ ಬಾರಿಗೆ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೈಸೂರು ಸಂಸ್ಥಾನ ಮೀಸಲಾತಿಯನ್ನು ಜಾರಿಗೊಳಿಸಿತು. ಪೋಲಿಸ್ ಇಲಾಖೆಯ ಮಧ್ಯಮ ಮತ್ತು ಕೆಳಹಂತದ ಒಟ್ಟು ಹುದ್ದೆಗಳಲ್ಲಿ ಶೇ.20 ರಷ್ಟು ಬ್ರಾಹ್ಮಣರಿಗೆ, ಮಿಕ್ಕ ಶೇ.80 ಬ್ರಾಹ್ಮಣೇತರರು, ದಲಿತರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಮೀಸಲು ಕಲ್ಪಿಸಿ ಆದೇಶ ಹೊರಡಿಸಲಾಯಿತು.

ಇದರ ಪರಿಣಾಮ 1902 ರಲ್ಲಿಮುಂಬೈ ಪ್ರೆಸಿಡೆನ್ಸಿಯ ಭಾಗವಾಗಿದ್ದ ಸಣ್ಣ ಸಂಸ್ಥಾನ ಕೊಲ್ಲಾಪುರದ ಮಹಾರಾಜ ತನ್ನ ಸಂಸ್ಥಾನದ ಶೇ. 50 ರಷ್ಟು ಹುದ್ದೆಗಳನ್ನು ಬ್ರಾಹ್ಮಣೇತರ ಸಮುದಾಯಗಳಿಗೆ ಮೀಸಲಿಟ್ಟು ಆದೇಶ ಹೊರಡಿಸಿದನು. ”ತಳಸಮುದಾಯಗಳ ರಚನಾತ್ಮಕ ಬೆಳವಣಿಗೆ ಪೂರಕ ವಾತಾವರಣ ರೂಪುಗೊಳ್ಳುತ್ತಿದ್ದ ಕಂಗೆಟ್ಟ ಜಾತಿವಾದಿಗಳು ಬ್ರಿಟಿಷ್ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದರು ಆದರೆ ಬ್ರಿಟಿಷರು ಇದಕ್ಕೆ ಸೊಪ್ಪು ಹಾಕದಿದ್ದಾಗ ತಮ್ಮ ಚಳವಳಿಯ ಕೇಂದ್ರವಾದ ಜಾತಿ ಪ್ರಜ್ಞೆಯನ್ನು ಮರೆಮಾಚಿ ಅದನ್ನೇ ಧರ್ಮದ ಹೆಸರಿನ ವಿಚಾರವಾಗಿ ರೂಪಿಸಿ ಪ್ರಚಾರ ಮಾಡುವ ಹಂತಕ್ಕೆ ಇಳಿದರು.

“ಸಾವಿತ್ರಿಬಾಯಿ ಫುಲೆ ಭಾರತದಲ್ಲಿ ಆರಂಭಿಸಿದ್ದ ತಳ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣೆಗೆಗಳ ಕುರಿತು ನಡೆಯುತ್ತಿದ್ದ ರಚನಾತ್ಮಕ ಕೆಲಸಗಳ ವೇಗಕ್ಕೆ ಕಡಿವಾಣ ಬಿದ್ದಿತು. ಒಂದು ಹಂತದಲ್ಲಿ ಹಿಮ್ಮುಖ ಚಲನೆ ಆರಂಭವಾಯಿತು ಎನ್ನಬಹುದು. ಪರಿಣಾಮ ಸ್ವತಂತ್ರ ಭಾರತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮುಂತಾದ ಮಹಾನೀಯರ ಪ್ರಯತ್ನಗಳ ಆಚೆಗೆ ಇಂದಿಗೂ ನಮಗೆ ನಮ್ಮ ಅಸ್ಮಿತೆಗಳ ಕುರಿತು 1966 ರಲ್ಲಿ ರೂಪುಗೊಂಡ ಧರ್ಮ ಕೇಂದ್ರಿತ ವಿಚಾರಗಳಿಂದ ನಮ್ಮ ಯುವಕರು ಬಿಡಿಸಿಕೊಳ್ಳಲು ಆಗುತ್ತಿಲ್ಲ. ”ಮುಂದೆ ನಿಧಾನವಾಗಿ ಜಾತಿವಾದ ತನ್ನ ಮೂಲರೂಪ ಬದಲಿಸಿ ಕೊಂಡು ಮತೀಯ ಚರಿತ್ರೆಯಾಗಿ ವ್ಯಾಪಕವಾಗಿ ಪ್ರಚಾರ ಪಡೆದ ಕಾರಣ ಈ ನೆಲದ ಸಮುದಾಯಸ್ಥಾಯಿ ಚರಿತ್ರೆ ರೂಪಿಸುತ್ತಿದ್ದ ಸಹಜಪ್ರಜ್ಞೆ ಮೆರವಿಗೆ ಒಳಗಾಯಿತು.

ಆಕೆಯ ದತ್ತುಪುತ್ರ ಯಶವಂತರಾವ್ ವೈದ್ಯರಾಗಿ ತಮ್ಮ ಪ್ರದೇಶದ ಜನರಿಗೆ ಸೇವೆ ಸಲ್ಲಿಸಿದರು. 1897 ರಲ್ಲಿ ಮಹಾರಾಷ್ಟ್ರದ ನಲ್ಲಸ್ಪೋರಾ ಸುತ್ತಮುತ್ತಲಿನ ಪ್ರದೇಶವನ್ನು ಬುಬೊನಿಕ್ ಪ್ಲೇಗ್‌ನ ವಿಶ್ವದಾದ್ಯಂತ ಮೂರನೇ ಸಾಂಕ್ರಾಮಿಕ ರೋಗವು ಕೆಟ್ಟದಾಗಿ ಬಾಧಿಸಿದಾಗ, ಧೈರ್ಯಶಾಲಿ ಸಾವಿತ್ರಿಬಾಯಿ ಮತ್ತು ಯಶವಂತರಾವ್ ರೋಗದಿಂದ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಪುಣೆಯ ಹೊರವಲಯದಲ್ಲಿ ಕ್ಲಿನಿಕ್ ಅನ್ನು ತೆರೆದರು. ಅವರು ರೋಗಿಗಳನ್ನು ಚಿಕಿತ್ಸಾಲಯಕ್ಕೆ ಕರೆತಂದು ಅಲ್ಲಿ ಅವರು ಅವರನ್ನು ನೋಡಿಕೊಳ್ಳುತ್ತಾರೆ. ಕಾಲಾನಂತರದಲ್ಲಿ ಅವರು ರೋಗಿಗಳ ಸೇವೆ ಮಾಡುವಾಗ ಆದೆ ರೋಗಕ್ಕೆ ತುತ್ತಾಗಿ ಮಾರ್ಚ್ 10, 1897 ರಂದು ನಿಧನರಾದರು.

ಸಾವಿತ್ರಬಾಯಿಫುಲೆಯವರು ಶಿಕ್ಷಣದ ಕ್ರಾಂತಿಯನ್ನು ಸೃಷ್ಟಿಸಿ ದೇಶದ ಮಹಿಳೆ ಗೌರವದಿಂದ ಬಾಳಲು ದಾರಿ ದೀಪವಾದರು ಈಗಿನ ದೇಶದ ಪ್ರತಿಯೊಬ್ಬ ಮಹಿಳೆಯರು ಸಾವಿತ್ರಿಬಾಯಿ ಫುಲೆ ಅವರ ಆದರ್ಶದಂತೆ ಬಾಳಬೇಕು ಅಂದಾಗ ಮಾತ್ರ ಅವರ ಶಿಕ್ಷಣದ ಹೋರಾಟಕ್ಕೆ ಅರ್ಥ ಸಿಕ್ಕಂತಾಗುತ್ತದೆ.

“ಮಹಿಳಾ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಿಳಾ ವಿಮೋಚಕಿ, ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದೇಶದ ಪ್ರತಿಯೊಂದು ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ತಲೆ ಎತ್ತಿ ಬದುಕುತ್ತಿದ್ದಾರೆ ಎಂದರೆ ಅವರ ಹೋರಾಟದ ಪ್ರತಿಫಲವಾಗಿದೆ. ನಾನಿಂದು ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವುದು ಅವರ ದಿಟ್ಟ ಹೋರಾಟದ ಪ್ರತಿಫಲ, ಅಂತಹ ಮಾತೆ ಸಾಧನೆಯಲ್ಲಿ ದೇಶದ ಪ್ರತಿಯೊಂದು ಹೆಣ್ಣು ಮಕ್ಕಳು ಸಾಗಬೇಕು ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. -ಲಕ್ಷ್ಮೀ ಗುಂಡಪ್ಪ ಸಿರವಾರ, ಶಿಕ್ಷಕಿ, ಸರಕಾರಿ ಪ್ರೌಢಶಾಲೆ ನವಲಕಲ್, ತಾ; ಸಿರವಾರ, ತಾಲೂಕು ಅಧ್ಯಕ್ಷರು ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘ. ಸಿರವಾರ.

“ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನೋವು ಅವಮಾನಗಳನ್ನು ಮೆಟ್ಟಿ ನಿಂತು. ಶತ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಾಲೆ ಪ್ರಾರಂಭಿಸಿ ವಿಧ್ಯಾ ಕೊಟ್ಟ ನಮ್ಮ ಅಕ್ಷರದವ್ವ ಸಾವಿತ್ರಿಭಾಯಿ ಫುಲೆ. – ಡಿ‌. ಶಶಿಕಲಾ ಸಿರವಾರ, ಅತಿಥಿ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಮಲ್ಲಟ, ತಾ;ಸಿರವಾರ

“”ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅದರ ನಷ್ಟ ಆ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಆಗುತ್ತದೆ ಎಂದು ಭಾವಿಸಿದ್ದ ಸಾವಿತ್ರಿಬಾಯಿ ಫುಲೆ ಅವರು ಅದಕ್ಕಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. – ಎಸ್. ಸೋನಿಯಾ ಸಿರವಾರ, ಅತಿಥಿ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾನಗರ ಸಿರವಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here