ರಾಯಚೂರು: ಶಿಕ್ಷಣ ಉಳಿಸಿ, ಎನ್ಇಪಿ ತಿರಸ್ಕರಿಸಿ, ಭಾರತ ಉಳಿಸಿ, ಬಿಜೆಪಿ ತಿರಸ್ಕರಿಸಿ ಎಂಬ ಘೋಷಣೆ ಅಡಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸೇರಿದಂತೆ ರಾಷ್ಟ್ರಮಟ್ಟದಲ್ಲಿ 16 ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ಜನವರಿ -12 ರಂದು ಪಾರ್ಲಿಮೆಂಟ್ ಚಲೋ ಹಮ್ಮಿಕೊಂಡಿದ್ದು, ಜಿಲ್ಲೆಯ ಎಸ್ಎಫ್ಐ ವಿದ್ಯಾರ್ಥಿ ನಾಯಕರು ರೈಲ್ವೇ ಮೂಲಕ ಬುಧವಾರ ದೇಶದ ರಾಜಧಾನಿ ದೆಹಲಿ ಕಡೆ ಪ್ರಯಾಣ ಬೆಳೆಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶಿಕ್ಷಣದ ಉಳಿವಿಗಾಗಿ, ದೇಶದ ಉಳಿವಿಗಾಗಿ ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ, ಕೇಂದ್ರೀಕರಣವನ್ನು ನಿಲ್ಲಿಸಿ, ಸ್ನಾತಕೋತ್ತರ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿ. ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ – 2020, ನೀಟ್ ಮತ್ತು ಇತ್ತೀಚೆಗೆ ಜಾರಿಗೆ ತಂದ ಗುಜರಾತ್ ಸಾಮಾನ್ಯ ವಿಶ್ವವಿದ್ಯಾಲಯ ಕಾಯಿದೆಯನ್ನು ರದ್ದುಗೊಳಿಸಬೇಕು.
ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಅವುಗಳ ವಿದ್ಯಾರ್ಥಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ನಿಯಮಿತ ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್ಗಳನ್ನು ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ, ಬೋಧಕ ಬೋಧಕೆತರ ಸಿಬ್ಬಂದಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ಪ್ರತಿ ನಿರುದ್ಯೋಗಿಗಳಿಗೆ ಕನಿಷ್ಠ 5000 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಪಾರ್ಲಿಮೆಂಟ್ ಚಲೋದಲ್ಲಿ ರಾಯಚೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾದ್ಯಕ್ಷ ರಮೇಶ್ ವೀರಾಪೂರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಭೋವಿ, ಗಣೇಶ ರಾಠೋಡ್, ಪವನ್ ಕಮ್ಮಾದಾಳ, ಸಾಗರ ಕೂಡಗಿ, ನೇಹಾಲ್ ಖಾನ್ ಗಂಗಾವತಿ, ಹರ್ಷಾ ಕರಿಯಜ್ಜಿ, ದುರಗಪ್ಪ ಯಮ್ಮಿಯವರ, ರೆಡ್ಡಿಶ್ವರ ಇದ್ದರು.