ಸುರಪುರ : ನಗರದ ರಂಗಂಪೇಟೆಯ ಮಂಡಳಿ ಬಟ್ಟಿ ಎದುರಿನ ಗುಡ್ಡದ ವಾರಿಯಲ್ಲಿದ್ದ ಸಾರ್ವಜನಿಕ ಮಹಿಳಾ ಶೌಚಾಲಯ ಕಟ್ಟಡವನ್ನು ಕಾನೂನು ಬಾಹಿರವಾಗಿ ರಾತ್ರಿ ನೆಲ ಸಮ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕ ಮಹಿಳಾ ಶೌಚಾಲಯವು 2007-08ನೇ ಸಾಲಿನಲ್ಲಿ ಎಸ್ಎಫ್ಸಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿತ್ತು, ಈ ಶೌಚಾಲಯ ಬಿಟ್ಟರೆ ಬೇರೆ ಯಾವುದೇ ಶೌಚಾಲಯ ಇರುವುದಿಲ್ಲ. ಆದರೆ, ಶೌಚಾಲಯ ನೆಲ ಸಮ ಮಾಡಿ ಮಹಿಳೆಯರ ಶೌಚಾಲಯಕ್ಕೆ ತೊಂದರೆ ಮಾಡಲಾಗಿದೆ ಎಂದು ಪೌರಾಯುಕ್ತರಿಗೆ ಬರೆದ ದೂರಿನಲ್ಲಿ ಆರೋಪಿಸಿದ್ದಾರೆ.
ಶೌಚಾಲಯಕ್ಕೆ ಹೊಂದಿಕೊಂಡು ಮಳಿಗೆ ನಿರ್ಮಾಣ ಮಾಡುತ್ತಿರುವ ಮಾಲೀಕರು ಜೆಸಿಬಿ ಯಂತ್ರವನ್ನು ಬಳಸಿ ಸದರಿ ಶೌಚಾಲಯದ ಕಟ್ಟಡ ನೆಲಸಮ ಮಾಡಿ ಶೌಚಾಲಯದ ಕಲ್ಲು, ಬಾಗಿಲು, ಕಿಟಕಿ, ಗೇಟ್ ತೆಗೆದುಕೊಂಡು ಹೋಗಿರುತ್ತಾರೆ. ಇದರಿಂದ ಮಹಿಳೆಯರಿಗೆ ಶೌಚಾಲಯಕ್ಕೆ ಹೋಗುವುದು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಇದು ಸರಕಾರದ ಆಸ್ತಿ ಮತ್ತು ಸಾರ್ವಜನಿಕರ ಹಣವಾಗಿರುತ್ತದೆ. ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಶೌಚಾಲಯವು ಸರಕಾರಿ ರಜೆ ದಿನಗಳನ್ನು ನೋಡಿಕೊಂಡು ನೆಲ ಸಮ ಮಾಡಿರುವುದನ್ನು ನೋಡಿದರೆ ಇದು ಶೋಚನೀಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಮಹಿಳಾ ಶೌಚಾಲಯದ ಕಟ್ಟಡವನ್ನು ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಪಡೆಯದೆ ಜೆಸಿಬಿ ಯಂತ್ರದ ಮೂಲಕ ನೆಲ ಸಮ ಮಾಡಿದ ಮಳಿಗೆ ನಿರ್ಮಾಣ ಮಾಡುತ್ತಿರುವ ಮಾಲೀಕರ ಮೇಲೆ ಪ್ರಕರಣ ದಾಖಲಿಸಬೇಕು. ನೆಲ ಸಮ ಮಾಡಿದ ಶೌಚಾಲಯವನ್ನು ಪುನಃ ನಿರ್ಮಾಣ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ದಸಂಸ ವಿಭಾಗೀಯ ಸಂಚಾಲಕ ಮಾನಪ್ಪ ಕಟ್ಟಿಮನಿ, ತಾಲೂಕು ಸಂಚಾಲಕ ಬಸವರಾಜ ಪೂಜಾರಿ ಬೆನಕನಹಳ್ಳಿ, ತಾಲೂಕು ಸಂಘಟನಾ ಸಂಚಾಲಕ ತಿಪ್ಪಣ್ಣ ನಾಗರಾಳ ಅವರು ಪೌರಯುಕ್ತರಿಗೆ ಆಗ್ರಹಿಸಿದ್ದಾರೆ.