ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಹಲವಾರು ಯೋಜನೆಗಳು ಕೈ ತಪ್ಪಿ ಹೋದರು ಬರುವ ದಿನಗಳಲ್ಲಿ ಅಭಿವೃದ್ಧಿ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿ ಮತ್ತೆ ಮಲತಾಯಿ ಧೋರಣೆ ಮುಂದುವರೆದಿರುವುದಕ್ಕೆ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರೂ ಯೋಜನೆಗಳು ವರ್ಗಾವಣೆ ಆಗಿರುವುದು ಹಾಗೂ ಮರಳಿ ಹೋಗಿರುವುದು ಈ ಭಾಗದ ರಾಜಕೀಯ ಧುರಣರ ಅಭಿವೃದ್ಧಿ ಮಾಡಬೇಕೆನ್ನುವ ಇಚ್ಚಾ ಶಕ್ತಿಯ ಕೊರತೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಅನೇಕ ನೀರಾವರಿ ಯೋಜನೆಗಳು ಬೇರೆ ಕಡೆ ವರ್ಗಾವಣೆ ಮಾಡಿ ಅಭಿವೃದ್ಧಿ ಕುಂಠಿತ ಆಗಿರುವುದಲ್ಲದೆ ಈ ಭಾಗದ ಹಲವಾರು ಜನರು ಉದ್ಯೋಗ ಕಳೆದುಕೊಂಡು ಕಂಗಾಲಗಿದ್ದಾರೆ. ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಆಯಾ ಭಾಗದ ಅಭಿವೃದ್ಧಿಗಾಗಿ ಗಣ್ಯರ ಹೆಸರಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 27 ಪ್ರತಿಷ್ಠಾನ ಸ್ಥಾಪಿಸಿದ್ದಾರೆ, ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಪ್ರತಿಷ್ಠಾನ ಇಲ್ಲದಿರುವುದು ದುರದೃಷ್ಟಕರ ಸಂಗತಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣವಾದರೆ ಹೇಗೆ ? ಈ ನಾಡಿನಲ್ಲಿ ಸಾಹಿತ್ಯ, ಕಲೆ, ಸಂಗೀತ, ಜಾನಪದ ಉಳಿಸಿ ಬೆಳೆಸುವುದು ಸರಕಾರದ ಕರ್ತವ್ಯವಾಗಿದೆ.
ಕನ್ನಡ ಸಾಹಿತ್ಯದ ಎರಡು ಕಣ್ಣುಗಳಾದ ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ಹುಟ್ಟಿದ್ದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ. ತತ್ವಪದಕಾರರು ಜನಿಸಿ ತತ್ವಪದಗಳು ರಚಿಸಿ ಕನ್ನಡ ನಾಡಿಗೆ ಕೊಡುಗೆ ನೀಡಿದ ಪವಿತ್ರ ನೆಲವಿದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ, ಸಂಗೀತದೊಂದಿಗೆ ಹಲವಾರು ಜನರು ಸೇವೆಗೈದು ಕಲ್ಯಾಣ ಕರ್ನಾಟಕ ಭಾಗವೆ ಜಗತ್ತಿಗೆ ಪರಿಚಯಿಸಿದ್ದಾರೆ.
ಮರಾಠಿ, ಉರ್ದು, ತೆಲಗು ಭಾಷೆಗಳ ಪ್ರಭಾವದ ಪರಿಸ್ಥಿತಿಯಲ್ಲಿಯು ಈ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲಾಗಿದೆ. ನಿಜಾಮನ ಆಳ್ವಿಕೆ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿಕೊಂಡು ಒಳಗಡೆ ಕನ್ನಡ ಪಾಠ ಮಾಡುವ ಕನ್ನಡ ನಾಡಿಗೆ ಅದೆಂತಹ ಕೊಡುಗೆ ನೀಡಿದೆ ಎಂಬುದನ್ನು ಆಳುವ ಸರ್ಕಾರ ಅರಿತುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಜನರ ತಾಳ್ಮೆಯನ್ನು ಸರಕಾರ ಪರೀಕ್ಷಿಸದೆ ಆದಂತಹ ಅನ್ಯಾಯ ಸರಿಪಡಿಸಿ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಈ ಭಾಗ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದರು.