ಕಲಬುರಗಿ: ತಾಲೂಕಿನ ಕೋಟನೂರ (ಡಿ) ಗ್ರಾಮದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಅವಮಾನಿಸಿದ ಆರೋಪಿಗಳಿಗೆ ಗಡಿಪಾರು ಮಾಡುವ ಹಾಗೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ ಮತ್ಥಳಿಗೆ ಸರಕಾರದಿಂದ ಸಿ.ಸಿ. ಕ್ಯಾಮರಾ ಅಳವಡಿಸಿ, ಮೂರ್ತಿಯನ್ನು ಅವಮಾನಿಸವಂತಹ ಆರೋಪಿಗಳಿಗೆ ವಿಶೇಷವಾದ ಕಾನೂನು ರಚಿಸಬೇಕೆಂದು ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ (ಗೌತಮ) ಪುಟಗೆ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೋಟನೂರ (ಡಿ) ಗ್ರಾಮದಲ್ಲಿರುವ ಡಾ: ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಕೆಲವೊಂದು ಸಮಾಜಘಾತುಕ ಶಕ್ತಿಗಳು ಕೂಡಿಕೊಂಡು ಅವಮಾನಗೊಳಿಸಿ, ಮಾನವ ಕುಲಕ್ಕೆ ಅವಮಾನ ಮಾಡಿ, ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆವುಂಟು ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಈಗಾಗಲೇ ಪುತ್ಥಳಿಗೆ ಅವಮಾನಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ ಗಡಿಪಾರು ಮಾಡುವ ಆದೇಶ ಹೊರಡಿಸಿ. ಇನ್ನೊಮ್ಮೆ ಇಂತಹ ನೀಚ ಕೃತ್ಯಗಳನ್ನು ಆಗದಂತೆ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ಕಲಬುರಗಿ ಜಿಲ್ಲೆಯಾದ್ಯಂತ ಇರುವ ಡಾ: ಬಿ.ಆರ್. ಅಂಬೇಡ್ಕರ್ ಪುತ್ಥಳಿ ಇರುವ ಸ್ಥಳಕ್ಕೆ ಸರಕಾರದ ವತಿಯಿಂದ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ, ಇನ್ನೊಮ್ಮೆ ಇಂತಹ ಕೃತ್ಯಗಳನ್ನು ಆಗದಂತೆ ಮತ್ತು ಸಮಾಜದಲ್ಲಿ ಕೋಮು ಗಲಭೆಗಳು ಸೃಷ್ಟಿಯಾಗದಂತೆ ತಾವುಗಳು ಕ್ರಮ ವಹಿಸಿ, ನ್ಯಾಯ ಒದಗಿಸಬೇಕು.
ವಿಶೇಷವಾಗಿ ಇಂತಹ ಕೃತ್ಯಗಳನ್ನು ಮಾಡುವ ಆರೋಪಿಗಳಿಗೆ ವಿಶೇಷ ಕಾನೂನು ರಚನೆ ಮಾಡುವುದರ ಮೂಲಕ ಇಂತಹ ಕೃತ್ಯಗಳನ್ನು ತಡೆಹಿಡಿಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮೀತ ಉದನೂರ, ಸಿದ್ದು ಕೋಗನೂರ, ಶ್ರೀನಿವಾಸ ರಾಮನಾಳ, ರಾಜಕುಮಾರ ಜೇವರ್ಗಿಕರ, ಶ್ರೀಮತಿ ಶೀಲಾ ಗಾಯಕವಾಡ, ಪ್ರದೀಪ ಕೋಟನೂರ, ದತ್ತು ಪಾಣೇಗಾಂವ ಹಾಗೂ ಇತರರು ಇದ್ದರು.