ಕಲಬುರಗಿ: ಪರಂಪರಾಗತ ಜ್ಞಾನವು ನೆನಪಿನ ರೂಪದಲ್ಲಿ ಮತ್ತು ಕ್ರಿಯಾರೂಪದಲ್ಲಿ ಸಾಗಿಬರುವ ಪ್ರಕ್ರಿಯೆಯೇ ಜಾನಪದ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ನಗರದ ಸರಕಾರಿ ಡಿಗ್ರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಜಾನಪದ ತಜ್ಞರ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಮೌಖಿಕ ಸಂಪ್ರದಾಯದಲ್ಲಿ ಸಾಗಿಬಂದ ಯಾವುದೇ ಪರಂಪರಾನುಗತ ವಿಷಯವಾಗಿರುವ ಪದ್ಯ ಮತ್ತು ಗದ್ಯ ವಿಷಯವಾಗಿರಲಿ ಅದುವೇ ಜಾನಪದ. ಹಿಂದಿನ ಜ್ಞಾನ, ಅನುಭವ, ಜಾಣ್ಮೆ, ನೈಪುಣ್ಯ, ಹವ್ಯಾಸಗಳು ಮತ್ತು ಅನುಸರಣಿಗಳು ಹಳೆಯ ತಲೆಮಾರಿನಿಂದ ಹೊಸ ತಲೆಮಾರಿಗೆ ಮಾತಿನ ಮೂಲಕ ಹಸ್ತಾಂತರಗೊಳಿಸುತ್ತವೆಯೋ, ಅವು ಪುಸ್ತಕ ಅಚ್ಚು ವಿಷಯಗಳು ಆಗಿರುವುದಿಲ್ಲವೋ ಅಲ್ಲಿ ನಾವು ಜಾನಪದವನ್ನು ಕಾಣುತ್ತೇವೆ ಎಂದು ಹೇಳಿದರು.
ಮೂಲ ಜಾನಪದವು ಇತ್ತೀಚೆಗೆ ಮೂಲೆಗುಂಪಾಗುತ್ತಿದೆ. ಸಿನಿಮಾಗಳಲ್ಲಿ ಬಳಸಲಾಗುತ್ತಿರು ಜಾನಪದ ಗೀತೆಗಳು ರೀಮಿಕ್ಸ್ ನೆಪದಲ್ಲಿ ಅದರ ಪಾವಿತ್ರ್ಯತೆಯನ್ನು ಹಾಳುಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಮಕ್ಕಳ ಕವಿ ಏ.ಕೆ.ರಾಮೇಶ್ವರ ವಹಿಸಿದ್ದರು. ಫರಹತಾಬಾದ್ ಸರಕಾರಿ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಇಂದುಮತಿ ಪಾಟೀಲ ಅವರು `ಜಾನಪದ ತಜ್ಞ ಡಾ.ಬಸವರಾಜ ಮಲಶೆಟ್ಟಿ ಜೀವನ’ದ ಕುರಿತು ಉಪನ್ಯಾಸ ನೀಡಿದರು.
ವಿಶ್ರಾಂತ ಪ್ರಾಂಶುಪಾಲರಾದ ಡಾ.ವಿಶಾಲಾಕ್ಷಿ ಕರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು.
ಜೇವರ್ಗಿಯ ಸರಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಅಲ್ಲಾವುದ್ದಿನ್ ಸಾಗರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಪ್ರಾಧ್ಯಾಪಕ ಸುರೇಶ ಮಾಳೇಗಾಂವ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕ ಪ್ರೊ. ಬಲಭೀಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಸುಮಿತ್ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ಪ್ರಾಧ್ಯಾಪಕಿ ಡಾ.ಚಿತ್ಕಳಾ ಮಠಪತಿ ವಂದಿಸಿದರು.
ಜಾನಪದ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಡಿ.ಪಿ.ಸಜ್ಜನ, ನಿಂಗಣ್ಣ ಉದನೂರ ಇತರರಿದ್ದರು. ಪ್ರೊ.ಶಾರದಾ ರಾಠೋಡ, ಡಾ.ಶೈಲಜಾ ಬಾಗೇವಾಡಿ ಸೇರಿದಂತೆ ಪ್ರಾಧ್ಯಾಪಕ ಬಳಗ ಹಾಗೂ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು.