ಯಾದಗಿರಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸರ್ವ ಸದಸ್ಯರ ಸಭೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಜರುಗಿತು.
11ರಂದು ಬೆಂಗಳೂರಿನಲ್ಲಿ ಜರುಗಿದ 15ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕರಾವಿಪ ಬೈಲಾ ಪರಿಷ್ಕರಣೆ ಉಪ ಸಮಿತಿಯ ಶಿಫಾರಸುಗಳನ್ನು ಚರ್ಚಿಸಿ ಕೆಲವೊಂದು ಮಹತ್ವದ ಸಲಹೆಗಳೊಂದಿಗೆ ಶಿಫಾರಸು ಮಾಡಿ ವಿಶೇಷ ಮಹಾಸಭೆಯ ಅನುಮೋದನೆ ಮಂಡಿಸಲು ನಿರ್ಣಯಿಸಲಾಯಿತು.
ಬೈಲಾ ಹೇಗಿರಬೇಕು? ಏನು ತಿದ್ದುಪಡಿ ಮಾಡುವುದು, ಮತಗಟ್ಟೆ ಸ್ಥಾಪಿಸುವುದು, ಮತ ಪೆಟ್ಟಿಗೆ ಮೂಲಕ ಚುನಾವಣೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಬೈಲಾ ಸಮಿತಿ ರಚಿಸಿರುವ ಕರಡು ಕುರಿತು ಚರ್ಚಿಸಿ ಸರ್ವಾನುಮತದ ನಿರ್ಣಯಕ್ಕೆ ಬರುವಂತೆ ಕರಾವಿಪ ರಾಜ್ಯಾಧ್ಯಕ್ಷ ಎಸ್.ವಿ. ಸಂಕನೂರ ಆರಂಭ ಭಾಷಣ ಮಾಡಿ ಸಭೆಗೆ ತಿಳಿಸಿದರು.
“ಗಿರಿ ನಾಡು, ಗಡಿ ನಾಡು ಎಂದೇ ಖ್ಯಾತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಮಟ್ಟದ ವಿಶೇಷ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಕರಾವಿಪದ ಬೈಲಾ ನಾಲ್ಕನೇ ಬಾರಿ ತಿದ್ದುಪಡಿ ಮಾಡಲು ಸಭೆ ಸೇರಿತ್ತು.”
ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಬೈಲಾ ತಿದ್ದುಪಡಿ ಮಾಡುವ ಕರುಡು 33 ವಿಷಯಗಳ ಕುರಿತು ಬೈಲಾ ತಿದ್ದುಪಡಿ ಸಭೆಯ ಮುಂದಿಟ್ಟರು. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು ಎಂದಾಗ, ಸಭೆಯಲ್ಲಿ ಹಾಜರಿದ್ದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೆಲವೊತ್ತು ಗದ್ದಲದ ವಾತಾವರಣ ಉಂಟಾಗಿ ಜಟಾಪಟಿ ಪ್ರಸಂಗವೇ ನಡೆಯಿತು. ಐದು ವರ್ಷ ಮಾಡಿರುವುದರ ಬಗ್ಗೆ ಬೈಲಾ ತಿದ್ದುಪಡಿ ಸಮಿತಿಯವರು ಮೊದಲು ವಿವರಣೆ ನೀಡಿದರು. ಕಾರ್ಯದರ್ಶಿ ಶ್ರೀನಾಥ, ಡಾ. ಕುಂಟೆಪ್ಪ ಗೌರೀಪುರ, ದೊಡ್ಡಬಸಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಚಂದ್ರ, ಜಗನ್ನಾಥ, ಎಂ.ಎಸ್. ಪಾಟೀಲ, ಸಿ. ಬಸವರಾಜ, ಆರ್.ಎಸ್. ಗಿರಿ ಇತರರಿದ್ದರು.
ಇದೇವೇಳೆಯಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಜಿ. ಉದ್ದಾರ ಅವರಿಗೆ ಸನ್ಮಾನಿಸಲಾಯಿತು. ಕೊನೆಗೆ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಸಲು ಸಭೆ ಒಮ್ಮತದಿಂದ ತೀರ್ಮಾನಿಸಲಾಯಿತು.