ಕಲಬುರಗಿ: ರೈತರಿಂದ ಹೆಸರು ಖರೀದಿ ಮಿತಿ ಏರಿಕೆ ಮಾಡುವ ಸಂಬಂಧದಲ್ಲಿ ಕಲಬುರಗಿ ಜಿಲ್ಲೆಯ ರೈತರ ಪರವಾಗಿ ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಹೆಸರು ಬೆಳೆಗಾರರ ಸಂಕಷ್ಟವನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮನವರಿಕೆ ಮಾಡಿಕೊಟ್ಟರು.
ಕೇಂದ್ರ ಸರಕಾರ ಈ ಮೊದಲು ನೋಂದಾಯಿತ ಪ್ರತಿ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲು ನಿರ್ಧರಿಸಿ ಪ್ರತಿ ಕ್ವಿಂಟಾಲ್ ಗೆ 6975 ರೂ. ಬೆಲೆ ನಿಗದಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 38691 ರೈತರು ತಮ್ಮ ಹೆಸರು ನೋಂದಾಯಿಸಿದ್ದರು. ಆದರೆ, ಕೇಂದ್ರ ಸರಕಾರ ತನ್ನ ನಿರ್ಧಾರ ಬದಲಿಸಿ ಒಬ್ಬ ರೈತರಿಂದ 10 ಕ್ವಿಂಟಾಲ್ ಬದಲಿಗೆ ಕೇವಲ 4 ಕ್ವಿಂಟಾಲ್ ಖರೀದಿ ಮಾಡವುದಾಗಿ ಘೋಷಿಸಿ, ಕಲಬುರಗಿ ಜಿಲ್ಲೆಯಿಂದ ಒಟ್ಟು 4739 ಮೆಟ್ರಿಕ್ ಟನ್ (47390 ಕ್ವಿಂಟಾಲ್) ಹೆಸರು ಕಾಳು ಮಾತ್ರ ಖರೀದಿ ಮಾಡುವುದಾಗಿ ತಿಳಿಸಿದೆ. ಈ ವಿಷಯವನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದು, ಕೇಂದ್ರ ಸರ್ಕಾರ ಒಮ್ಮೆಲೆ ತನ್ನ ನಿರ್ಧಾರ ಬದಲಿಸಿರುವುದರಿಂದ ರೈತರು ಚಿಂತೆಗೀಡಾಗಿದ್ದು, ಕಲಬುರಗಿ ಜಿಲ್ಲೆಯ ರೈತರನ್ನು ಸಂಕಷ್ಟದಿಂದ ಹೊರತರಬೇಕೆಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಭರವಸೆಯ ಮೇಲೆ ಕಲಬುರಗಿ ಜಿಲ್ಲೆಯ ರೈತರು ಹೆಸರು ಕಾಳು ಬೆಳೆದಿದ್ದು, ಕೇಂದ್ರ ಸರ್ಕಾರ ದಿಢೀರನೆ ನಿರ್ಧಾರ ಬದಲಿಸಿರುವುದರಿಂದ ಕಲಬುರಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿರುತ್ತೇನೆ. ಕೇಂದ್ರ ಸರ್ಕಾರ ಪೂರ್ವ ನಿರ್ಧಾರದಂತೆ ಪ್ರತಿ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ಅವರಲ್ಲಿ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮಾಡಿರುವ ಮಿತಿಯನ್ನು ಸಡಿಲಿಸಿ, ಹೆಸರು ಕಾಳು ಕೊಳ್ಳುವ ಪ್ರಮಾಣವನ್ನು ಹೆಚ್ಚಿಸುವದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದು, ಕಲಬುರಗಿ ಜಿಲ್ಲೆಯ ಜನರು ಆತಂಕಕ್ಕೀಡಾಗಬಾರದೆಂದು ಈ ಮೂಲಕ ಕಲಬುರಗಿ ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.