ಕ್ರಾಂತಿಕಾರಕ, ಬದಲಾವಣೆಗಳ, ಪಿತಾಮಹ, ಪೆರಿಯಾರ್ ಜನ್ಮದಿನ

0
84

ಪೆರಿಯಾರ್ ಜನ್ಮ ತಾಳಿ ಇಂದಿಗೆ 140 ವರ್ಷಗಳು. ಇಂದಿಗೂ ಕೂಡ ದಕ್ಷಿಣದ ಅಸ್ಮಿತೆಯ ಪ್ರಸ್ತಾವ ಬಂದಾಗಲೆಲ್ಲಾ ಪೆರಿಯಾರ್ ಹೆಸರು ಮತ್ತೆ ಮತ್ತೆ ನೆನಪಾಗುತ್ತದೆ.

ಪೆರಿಯಾರ್ ರಾಮಸ್ವಾಮಿ ಅವರು ಕನ್ನಡ ಮಾತೃಭಾಷೆಯಾಗಿ ಹೊಂದಿದ್ದ ಕುಟುಂಬದಲ್ಲಿ ಸೆಪ್ಟೆಂಬರ್ 17, 1879ರಲ್ಲಿ ಈರೋಡಿನಲ್ಲಿ ಜನಿಸಿದ ಪೆರಿಯಾರ್ ಬಾಲ್ಯದಲ್ಲಿಯೇ ಜಾತಿ ಮತ್ತು ಲಿಂಗ ತಾರತಮ್ಮ್ಯವನ್ನು ನೋಡಿದವರು‌.

Contact Your\'s Advertisement; 9902492681

ದೇವರ ಬಗ್ಗೆ ನಂಬಿಕೆ ಹೊತ್ತು ಕಾಶಿ ವಿಶ್ವನಾಥ ದೇವಾಲಯವನ್ನು ಅತ್ಯಂತ ಭಕ್ತಿಯಿಂದ ಸಂದರ್ಶಿಸಲು ಹೊರಟ ರಾಮಸ್ವಾಮಿ ಅವರಿಗೆ ಅಲ್ಲಿ ಕಂಡ ಬ್ರಾಹ್ಮಣೀಯ ಪಂಡರ ಪುಂಡಾಟ, ಇತರ ಜನರ ಶೋಷಣೆ, ಅಸಹ್ಯ ಹುಟ್ಟಿಸುವ ಗಲೀಜುತನ, ಹೆಣಗಳನ್ನು ಅರ್ಧ ಸುಟ್ಟು ನೀರಿನಲ್ಲಿ ಬಿಸಾಡುವ ಹೇಯತನ ಇವುಗಳನ್ನೆಲ್ಲಾ ಕಂಡು ಮನನೊಂದಿತು. ಜೊತೆಗೆ ಹಸಿವಿನಿಂದ ಅನ್ನ ಛತ್ರಕ್ಕೆಂದು ಹೋದ ಇವರನ್ನು ಬೇರೆ ಜಾತಿಯವನೆಂದು ಅನ್ನ ನೀಡದೆ ಕ್ರೂರವಾಗಿ ಹೊರಗೆ ತಳ್ಳಲಾಯಿತು. ಇದರಿಂದ ಅವರಿಗೆ ದೇವರ ಮೇಲಿನ ನಂಬಿಕೆ ಹೋದುದು ಮಾತ್ರವಲ್ಲ, ಮನುಷ್ಯನಿಗೆ ಕಳೆದು ಹೋಗಿರುವ ಸ್ವಾಭಿಮಾನವನ್ನು ಮರಳಿಸುವಲ್ಲಿ ಪ್ರಯತ್ನಶೀಲರಾಗುವ ಅದಮ್ಯ ದೃಢ ಸಂಕಲ್ಪ ಮೂಡಿಬಂತು. ಮೊದಲು ತಮ್ಮ ಗುಂಪನ್ನು ‘#ಜಸ್ಟಿಸ್_ಪಾರ್ಟಿ’ ಎಂದು ಕರೆದರು. ಮುಂದೆ ಅದನ್ನು ದ್ರಾವಿಡರ ಮನೋಭಾವನೆಯ ಸಂಕೇತ ಎಂಬ ನಿಟ್ಟಿನಲ್ಲಿ ‘#ದ್ರಾವಿಡ_ಕಳಗಂ’ ಎಂದು ಬದಲಿಸಿದರು.

ಮೂರ್ತಿಪೂಜೆ, ಜಾತೀಯತೆ, ಮೂಢ ನಂಬಿಕೆಗಳು, ಸ್ತ್ರೀ ಮತ್ತು ಕೆಳವರ್ಗದ ಜನಜೀವನದ ಶೋಷಣೆಯಲ್ಲಿ ತತ್ತರಿಸಿ ಕೊಳೆತು ನಾರುತ್ತಿದ್ದ ಭಾರತೀಯ ಜನಜೀವನದಲ್ಲಿ ಪೆರಿಯಾರ್ ರಾಮಸ್ವಾಮಿಯವರು ಮಾಡಿದ ಕ್ರಾಂತಿ ಮಹತ್ವಪೂರ್ಣವಾದುದು. #ದ್ರಾವಿಡರ_ಸ್ವಾಭಿಮಾನ ಎಂಬುದು ಅವರ ಕ್ರಾಂತಿಕಾರಕ ಮಾತು. ಅಂದು ಮದ್ರಾಸು ಪ್ರಾಂತ್ಯದಲ್ಲಿದ್ದ ಅವರ ಚಳುವಳಿ ಹೆಚ್ಚಾಗಿ ತಮಿಳಿಗರನ್ನು ಒಳಗೊಂಡಿತ್ತಾದರೂ ಅವರ ಹಲವಾರು ಹೋರಾಟಗಳಾದ ಕೇರಳದ ‘ವೈಕೊಂ’ನಲ್ಲಿನ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪ್ರವೇಶ ಮುಂತಾದ ವಿಚಾರಗಳಲ್ಲಿ ಅವರ ಹೋರಾಟ ಆ ಗಡಿಗಳಿಗೆ ಸೀಮಿತವಾಗಿರಲಿಲ್ಲ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರಭಾಷೆಯ ಕುರಿತಾದ ಸಮಾವೇಶದಲ್ಲಿ ಕೂಡಾ ಪ್ರಮುಖರಾಗಿ ಭಾಗವಹಿಸಿದ್ದ ಪೆರಿಯಾರರು, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಮಾಡಿ ಅದರಡಿಯಲ್ಲಿ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡುವ ಪ್ರವೃತ್ತಿಗೆ ಎಡೆಕೊಡದಿರೊಣ ಎಂದು ಹೇಳಿದ್ದರು.

ಬಡಜನರ, ಶೋಷಿತ ಜನಾಂಗದ ಪರ ಧ್ವನಿಯಾಗಿ, ಶೋಷಿತ ಜನಾಂಗ ಮತ್ತು ಸ್ತ್ರೀಯರಿಗೆ ಸಮಾನತೆ ಇಲ್ಲದಿದ್ದ ಕಾಲದಲ್ಲಿ ಅವರು ತಂದ ಸಮಾಜದ ಸುಧಾರಣೆಗಳ ಪ್ರಯತ್ನವನ್ನು ಇಂದಿನ ಸಮಾಜ ಪಡೆದಿದೆ. ಸಮಾಜ ಸುಧಾರಣೆಗಳ ಬಗೆಗೆ ಆಸ್ಥೆ ಹೊಂದಿದ್ದ ರಾಮಸ್ವಾಮಿ ನಾಯ್ಕರ್ ಅವರಿಗೆ ರಾಜಕೀಯ ಲಾಭ ಪಡೆದು ಅಧಿಕಾರ ನಡೆಸುವುದು ಬೇಕಿರಲಿಲ್ಲ. ಆದರೆ ಅವರ ಅನುಯಾಯಿಗಳಾಗಿದ್ದ ಅಣ್ಣಾ ದುರೈ ಮುಂತಾದವರಿಗೆ ರಾಜಕೀಯ ಆಕಾಂಕ್ಷೆ ಇದ್ದದ್ದರಿಂದ ಅವರೆಲ್ಲಾ ದ್ರಾವಿಡ ಮುನ್ನೇತ್ತರ ಕಳಗಂ ನಿರ್ಮಿಸಿಕೊಂಡು ಆಚೆ ಬಂದು ರಾಜಕೀಯಕ್ಕೆ ಇಳಿದರು. ನಂತರದ ಮುಂದಿನ ತಲೆಮಾರುಗಳಲ್ಲಿ ಹಲವು ‘#ಕಳಗಂ’ಗಳ ಕಾಳಗ ಮಾಡಿಕೊಂಡು ಬದುಕಿದ ಸ್ವಾರ್ಥ ರಾಜಕಾರಣಿಗಳಿಗಿಂತ ಪೆರಿಯಾರ್ ರಾಮಸ್ವಾಮಿ ಅವರು ವಿಭಿನ್ನ ಮತ್ತು ಸಾಮಾಜಿಕ ನಿಲುವಿನವರಾಗಿದ್ದರು ಎಂಬುದು ಕೂಡಾ ಮಹತ್ವಪೂರ್ಣ.

“ಇವರು ನವಯುಗದ ಪ್ರವಾದಿ, ದಕ್ಷಿಣ ಪೂರ್ವ ಏಷ್ಯಾದಲ್ಲಿನ ಸಾಕ್ರೆಟಿಸ್. ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹರಾದ ಈತ ಎಲ್ಲಾ ರೀತಿಯ ಅಜ್ಞಾನ, ಮೂಢನಂಬಿಕೆ, ಕಟ್ಟುಪಾಡು, ಮನುಷ್ಯ ಮನುಷ್ಯನ ನಡುವಿನ ಭೇಧಗಳಿಗೆ ಕಡುವಿರೋಧಿಯಾಗಿದ್ದಾರೆ”. #ಯುನೆಸ್ಕೋ ಅವರಿಗೆ ನೀಡಿರುವ ಪ್ರಶಸ್ತಿ ಪತ್ರದಲ್ಲಿ ದಾಖಲಾಗಿದೆ.

ರಾಮಸ್ವಾಮಿ ಪೆರಿಯಾರರು ಡಿಸೆಂಬರ್ 24, 1973ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೆಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ನಿಟ್ಟಿನಲ್ಲಿ ಸ್ಮರಣೀಯರಾಗಿದ್ದಾರೆ.

(ಮುಖ್ಯವಾಗಿ: ಸ್ವಾತಂತ್ರ ಹೋರಾಟದ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ಪೆರಿಯಾರರು ಕಾಂಗ್ರೆಸ್ಸಿನಲ್ಲಿ ಹಲವಾರು ವರ್ಷವಿದ್ದು ಜೈಲುವಾಸ ಅನುಭವಿಸಿದರಾದರೂ ತಮ್ಮ ನಿಲುವುಗಳಿಗೆ ಸೂಕ್ತ ಸಹಸ್ಪಂದನವಿಲ್ಲದಿದ್ದಾಗ ಅದರಿಂದ ಹೊರಬಂದರು. ಇದನ್ನು ಪೂರ್ತಿ ವಿವರವಾಗಿ ಹೇಳಬೇಕೆಂದರೆ: 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಗೆ ಸೇರಿದರು. ಆದರೆ ಆ ಪಕ್ಷವು ಕೇವಲ ಬ್ರಾಹ್ಮಣರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ತಿಳಿದು 1925ರಲ್ಲಿ ಕಾಂಗ್ರೆಸ್ ಗೆ ವಿಧಾಯ ಹೇಳಿದರು. ಅಲ್ಲದೆ ದ್ರಾವಿಡರನ್ನು ಬ್ರಾಹ್ಮ್ನತ್ವದಲ್ಲಿ ಒಳಗೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿದರು.)

ಚಂದನ್ ಕುಮಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here