ಯಾದಗಿರಿ: ವಡಗೇರಾ ತಾಲೂಕಿನ ಬೀರನಾಳ ಗ್ರಾಮದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಪ್ರಾರಂಭಿಸದೆ ಇರುವುದರಿಂದ ಜನತೆ ಶುದ್ಧ ಕುಡಿವ ನೀರಿನಿಂದ ವಂಚಿತರಾಗಿದ್ದು, ಕೂಡಲೇ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸಬೇಕೆಂದು ಜಯ ಕರ್ನಾಟಕ ಸಂಘಟನೆ ವಡಗೇರಾ ತಾಲೂಕು ಅಧ್ಯಕ್ಷ ಶಿವುಗೌಡ ಒತ್ತಾಯಿಸಿದ್ದಾರೆ.
ಕಳೆದ ೬ ತಿಂಗಳಿನ ಹಿಂದೆ ಸರ್ಕಾರದ ವತಿಯಿಂದ ಬೀರನಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದ್ದರೂ ಇಲ್ಲಿಯವರೆಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕಳೆದ ಹಲವು ದಿನಗಳಿಂದ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಿಆರ್ಇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲವಾದ್ದರಿಂದ ಗ್ರಾಮಸ್ಥರು ಸಹನೆಯ ಕಟ್ಟೆ ಹೊಡೆದಿದೆ. ಇದನ್ನರಿತು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಬೀರನಾಳ ಗ್ರಾಮದಲ್ಲಿನ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸಬೇಕು ಇಲ್ಲವಾದರೆ ಜಿಲ್ಲಾ ಪಂಚಾಯಿತಿ ಎದುರು ಬೀರನಾಳ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುವುದು ಎಂದು ಎಚ್ಚರಿಸಿದ್ದಾರೆ.