ಹಾವು ಹಾಲು ಕುಡಿಯುವುದಿಲ್ಲ ಹಾವಿಗೇಕೆ ಹಾಲು?: ಬಸವ ಪಂಚಮಿ ಆಚರಿಸಲು ಕರೆ

0
160

ಕಲಬುರಗಿ: ಸಾಂಪ್ರದಾಯಿಕ ಸಮಾಜವನ್ನು ವೈಜ್ಞಾನಿಕ ಪ್ರಜ್ಞೆಯೊಂದಿಗೆ ಮಾದರಿ ಸಮಾಜವಾಗಿ ರೂಪಿಸಲು 12ನೇ ಶತಮಾನದಲ್ಲಿ ಬಸವಣ್ಣನವರು ಶತ ಪ್ರಯತ್ನಪಟ್ಟರು ಎಂದು ಪತ್ರಕರ್ತ, ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ, ಮಾನವ ಬಂಧುತ್ವ ವೇದಿಕೆ, ಸಂಸ್ಕಾರ ಪ್ರತಿಷ್ಠಾನ, ಕಲಬುರಗಿ ಆರ್ಟ್ ಥಿಯೇಟರ್ ಸಹಯೋಗದಲ್ಲಿ ಇಲ್ಲಿನ ಆದರ್ಶ ನಗರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಸವಣ್ಣನವರ ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು’ ಎಂಬ ವಚನದಲ್ಲಿ ಆರು ಸಾಲುಗಳಿದ್ದು ಮೊದಲಿನ ನಾಲ್ಕು ಸಾಲುಗಳು ಮನುಷ್ಯ ಬದುಕಿನ ವಿರೋಧಾಭಾಸಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

Contact Your\'s Advertisement; 9902492681

ನಾಗರಪಂಚಮಿಯಂದು ಹಾವಿನ ಹುತ್ತಕ್ಕೆ, ಕಲ್ಲ ನಾಗರಕ್ಕೆ ಹಾಲೆರೆಯುವ ಬದಲು ಹಸಿದವರಿಗೆ, ಬಡ ಮಕ್ಕಳಿಗೆ ಹಾಲುಣಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಆರ್.ಜಿ.‌ಶೆಟಗಾರ, ಹಿರಿಯ ಲೇಖಕ ಅಪ್ಪಾರಾವ ಅಕ್ಕೋಣೆ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಮಾತನಾಡಿ, ನಮ್ಮ ಹಬ್ಬ ಹರಿದಿನಗಳಿಗೆ ಇತಿಹಾಸ ಹಾಗೂ ಮಹತ್ವವಿದೆ. ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಸಮುದಾಯ, ಸಾಮೂದಾಹಿಕ ಮಾನವೀಯ ಸಂಬಂಧ ಬೆಸೆಯುವ ವಿಚಾರಗಳಿವೆ. ಅವುಗಳನ್ನು ಅರಿತು ಆಚರಿಸಬೇಕು. ಪ್ರೀತಿಯ ಕೊರತೆ ಗಟ್ಟಿಗೊಳಿಸುವ ಈ ಹಬ್ಬಗಳನ್ನು ವೈಜ್ಞಾನಿಕ, ವೈಚಾರಿಕ ಹಿನ್ನೆಲೆಯಲ್ಲಿ ಆಚರಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ಉಪನ್ಯಾಸಕ ಜೆ. ಮಲ್ಲಪ್ಪ ಮಾತನಾಡಿ, ವೈದಿಕಶಾಹಿ ಹುನ್ನಾರಕ್ಕೆ ಬಲಿಯಾಗದೆ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ. ಮೌಢ್ಯ, ಕಂದಾಚಾರದಿಂದ ಹೊರ ಬರಬೇಕು ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಸಂಚಾಲಕ ನಾಗೇಂದ್ರ ಜವಳಿ, ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಶಾಂತಪ್ಪ ಪಾಟೀಲ ವೇದಿಕೆಯಲ್ಲಿದ್ದರು.

ಕಲಬುರಗಿ ಆರ್ಟ್ ಥಿಯೇಟರ್ ನ ಸುನಿಲ್ ಮಾನಪಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೈಲಾರಿ ದೊಡ್ಡಮನಿ ನಿರೂಪಿಸಿದರು. ಸಂಗಮೇಶ ಕಲಬುರಗಿ ವಂದಿಸಿದರು.

ವಿಠ್ಠಲ್ ಚಿಕಣಿ, ಬಸವರಾಜ ಬಾವಿ, ಸಂಗಮೇಶ ಗುಬ್ಬೇವಾಡ, ಅನಿಲ್ ಮಂಗಾ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಹಾವು ಸರಿಸೃಪ ಪ್ರಾಣಿ, ಹಾವು ಹಾಲು ಕುಡಿಯುವುದಿಲ್ಲ. ಹಾವಿಗೆ ಕಿವಿ ಕೇಳುವುದಿಲ್ಲ. ಮೌಢ್ಯಾಚರಣೆ ಬೇಡ. ವೈಚಾರಿಕ ಮನೋಭಾವನೆ ಅಗತ್ಯ. -ಸುನಿಲ್ ಮಾನಪಡೆ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here