ಕಲಬುರಗಿ: ನಗರದ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಯುವ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಲು ಏರ್ಪಡಿಸಿದ ವಿಶೇಷ ಕಾರ್ಯಕ್ರಮ “ವಚನ-ನಾದ-ಧ್ಯಾನ” ಕಾರ್ಯಕ್ರಮವನ್ನು ಬಾಪು ಪದ್ಮನಾಭ ಅಂತರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರು, ರಾಷ್ಟ್ರಪ್ರಶಸ್ತಿ ಪುರಸ್ಕøತರು ಅವರು ಉದ್ಘಾಟಿಸಿ ಕೊಳಲು ವಾದನ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಮಾತನಾಡುತ್ತ, “ಬಿದಿರುಗೆ ಸಂಸ್ಕಾರ ಕೊಟ್ಟಾಗ ಕೊಳಲಾಗುತ್ತದೆ. ಅದಕ್ಕೆ ಉತ್ತಮವಾಗಿ ನುಡಿಸಿದಾಗ ಸಂಗೀತ ಹೊರಹೊಮ್ಮುತ್ತದೆ. ಹಾಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಅವಶ್ಯ ಎಂದರು.
ಬರೀ ದೈವಿಕೃಪೆ ಇರಬೇಕೆಂದು ಅಪೇಕ್ಷಿಸುತ್ತೇವೆ ಆದರೆ “ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯಶೀಲತೆ ಇದ್ದಲ್ಲಿ ದೈವಿಕೃಪೆ ಇರುತ್ತದೆ” ಎಂಬ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ನುಡಿಮುತ್ತನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಿಮ್ಮ ವ್ಯಕ್ತಿತ್ವ ವಿಕಾಸಗೊಳುತ್ತದೆ ಅದಕ್ಕೆ ಸಂಗೀತ ಕಲಿಯುವುದರಿಂದ, ಹಾಡುವುದರಿಂದ ಮನಸ್ಸಿಗೆ ಆನಂದ ಉಂಟಾಗುತ್ತದೆ. ಏಕಾಗ್ರತೆ ಹೆಚ್ಚಾಗುತ್ತದೆ. ಪಠ್ಯಪುಸ್ತಕಗಳಲ್ಲಿನ ಪದ್ಯಗಳನ್ನು ಸಂಗೀತಕ್ಕೆ ಅಳವಡಿಸಿದರೆ ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೇರೇಪಿಸಿದರು.
ಶರಣರ ವಚನಗಳನ್ನು ಕೊಳಲು ವಾದನದಲ್ಲಿ ನುಡಿಸಿ ಸಂಗೀತದ ರಸಾನುಭವವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕಲೆ, ಸಾಹಿತ್ಯ, ಸಂಗೀತದಲ್ಲಿಯೂ ಆಸಕ್ತಿ ಹೆಚ್ಚಾದರೆ ಏಕಾಗ್ರತೆ ಹೆಚ್ಚಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೋತ್ಸಾಹಿಸಿದರು.
ಉದ್ದಂಡಯ್ಯ, ಸಂಚಾಲಕರು ಬಸವ ಸಮಿತಿ ಕಲಬುರಗಿ ಅವರು ವಿದ್ಯಾರ್ಥಿಗಳು ಶರಣರ ವಚನಗಳನ್ನು ಓದಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು. ಡಾ. ಆನಂದ ಸಿದ್ಧಾಮಣಿ ಅವರು ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, “ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ಧ್ಯಾನದ ಅವಶ್ಯಕತೆ ಇದೆ. ಶರಣರ ವಚನಗಳನ್ನು ಓದಿ ಅರ್ಥಿಸಿಕೊಂಡಾಗ ಅವು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಜೀವನದಲ್ಲಿ ಉತ್ತಮ ಮನುಷ್ಯನಾಗಲು, ಯಶಸ್ಸು ಸಾಧಿಸಲು ನಮ್ಮ ಗುರಿಯೇ ನಮ್ಮ ಧ್ಯಾನ, ಕತ್ತಲೇಯಲ್ಲಿ ಅದೇ ನಾದ ಮತ್ತು ಶ್ರೇಷ್ಠ ಸಾಧಕರಂತೆ ಸಾಧನೆ ಮಾಡಲು ಕಠಿಣ-ಪರಿಶ್ರಮ, ಪ್ರಾಮಾಣಿಕತೆ, ನಿರಂತರ ಅಧ್ಯಯನ, ಏಕಾಗ್ರತೆ, ಧ್ಯಾನ ನಿಮ್ಮದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಕಾಲೇಜಿನ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ,ಪ್ರಭುಗೌಡ ಸಿದ್ಧಾರೆಡ್ಡಿ, ರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.