ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯ್ತಿ ಇವರುಗಳ ಸಂಯುಕ್ತಾಶ್ರದಲ್ಲಿ ಜನವರಿ 19ರಂದು ಮಹಾಯೋಗಿ ವೇಮನ ಜಯಂತಿ ಆಚರಣೆ-2025 ಆಚರಿಸಲಾಗುವುದು ಎಂದು ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಚನ್ನಾರೆಡ್ಡಿ ಪಾಟೀಲ ತಿಳಿಸಿದರು.
ನಗರದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕರಾದ ಎಂ.ವೈ. ಪಾಟೀಲ, ಕನೀಜ್ ಫಾತಿಮಾ, ಮಾಜಿ ಸಚಿವ ಬಾಬುರಾವ ಚಿಂಚನಸೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಉಚಿತ ತಪಾಸಣಾ ಶಿಬಿರ:
ಮಹಾಯೋಗಿ ಮೇಮನ ಜಯಂತಿ ನಿಮಿತ್ತ ರೆಡ್ಡಿ ಸಮಾಜ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘ, ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಕಾಮರೆಡ್ಡಿ ಆಸ್ಪತ್ರೆ ಮತ್ತು ಆಶೀರ್ವಾದ ಆಸ್ಪತ್ರೆ ಇವರ ಸಹಯೋಗದಲ್ಲಿ ಜ.19ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ನೇತ್ರ ಚಿಕಿತ್ಸಾ ಮತ್ತು ಮದುಮೇಹದ ಕಣ್ಣಿನ ಕಾಯಿಲೆಗಳ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಶಿಬಿರ ಉದ್ಘಾಟಿಸಲಿದ್ದಾರೆ ಎಂದು ಡಾ. ರಾಜಶ್ರೀ ರೆಢ್ಡಿ ತಿಳಿಸಿದರು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮಲ್ಲಿಕಾರ್ಜುನ ರೆಡ್ಡಿ ಕೊಳ್ಳೂರ- 9663363632, ಗುರುನಾಥರೆಡ್ಡಿ- 7259179295ಗೆ ಸಂಪರ್ಕಿಸುವಂತೆ ಕೋರಿದರು.
ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಕರಡ್ಡಿ ಮಾತನಾಡಿ, ಮಹಾಯೋಗಿ ಮೇಮನ ಅವರ 613ನೇ ಜಯಂತಿ ಆಚರಿಸಲಾಗುತ್ತಿದ್ದು, ತೆಲುಗು ಭಾಷೆಯ ಇವರ ಚೌಪದಿಗಳು ವಿವಿಧ ಭಾಷೆಗಳಿಗೆ ಅನುವಾಗೊಂಡಿವೆ. ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಅನುವಾದ ಮಾಡಿದ ಜೀವ ಕಾರಣ್ಯ ಮಹಾಯೋಗಿ ವೇಮನ ಎನ್ನುವ ಕೃತಿ ಕೂಡ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ವಿಜಯರೆಡ್ಡಿ ಹಾಗೂ ಮಹೇಶ ಹರಸೂರ ಮಾತನಾಡಿ, ರೆಡ್ಡಿ ಯುವ ಸಮಾಜದ ವತಿಯಿಂದ ಬೆಳಗ್ಗೆ ಬೆಳಗ್ಗೆ 9.30ಕ್ಕೆ ಜಗತ್ ವೃತ್ತದಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು. ಚಂದ್ರಶೇಖರರೆಡ್ಡಿ ನಾಲವಾರ, ವಿಜಯರೆಡ್ಡಿ, ಡಾ. ಲಕ್ಷ್ಮೀ ಅರಸಿಣಗಿ, ಮಹೇಶ ಹರಸೂರ ಇತರರಿದ್ದರು.
ರಾಜಕೀಯ ಗಣ್ಯರ ಗೈರು- ಬೇಸರ:
ಪ್ರತಿ ವರ್ಷದ ಜಯಂತಿ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು ಗೈರು ಹಾಜರಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಆಮಂತ್ರಣ ಪತ್ರಿಕೆಯಲ್ಲಿರುವ ಯಾರೊಬ್ಬರೂ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ. ಈ ಬಾರಿ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆಗ್ರಹಿಸಿದರು.