ಕಲಬುರಗಿ: ಇಂದು ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮನ್ನಡೆ ಸಹಯೋಗದಲ್ಲಿ ಕಲಬುರಗಿ ನಗರದ ನೆಹರು ಗಂಜನಲ್ಲಿರುವ ಶ್ರೀ ಶರಭಯ್ಯ ಗಾದಾ ಬಾಲಕಿಯರ ಸಂಯುಕ್ತ ಕಲಾ & ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ “ಯುವಜನ ಆರೋಗ್ಯ ಅರಿವಿನ ಅಭಿಯಾನ”ಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಂಜನಾ ಬಿರಾದಾರ ನೇತೃತ್ವದಲ್ಲಿ ಆರೋಗ್ಯ & ಪೌಷ್ಟಿಕ ಆಹಾರದ ಕುರಿತು ಘೋಷಣೆಗಳನ್ನು ಮೊಳಗಿಸುವುದರ ಮೂಲಕ ‘ಯುವಜನ ಆರೋಗ್ಯ ಅಭಿಯಾನ’ಕ್ಕೆ ವಿನೂತನ ರೀತಿಯಲ್ಲಿ ಚಾಲನೆ ನೀಡದರು.
ಯುವಜನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರ ಮುತುವರ್ಜಿ ವಹಿಸಿ ಯುವಜನಹಕ್ಕುಗಳ ರಕ್ಷಣೆಗಾಗಿ ಆಯೋಗ ಸ್ಥಾಪಿಸಬೇಕು. ಯುವಜನರು ಆ ನಿಟ್ಟಿನಲ್ಲಿ ಧ್ವನಿ ಎತ್ತಬೇಕು ಎಂದು ಹೇಳಿದರು. ಯುವ ಮುನ್ನಡೆ ತಂಡದ ಸದಸ್ಯರಾದ ಲಕ್ಮೀ, ಮಹಾದೇವ, ವಂದನಾ, ಮಧುಸೂದನ್, ರಾಧಿಕಾ, ರಾಕೇಶ್, ಶಂಭು ಅಭಿಯಾನದ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಸಂವಾದ ಸಂಸ್ಥೆಯ ಕಾರ್ಯಕರ್ತೆ ರುಕ್ಮಿಣಿ ಮಾತನಾಡಿ ಎಲ್ಲ ಯುವಜನರನ್ನು ಒಂದೇ ತೆರನಾಗಿ ನೋಡಲಾಗುವುದಿಲ್ಲ ಅವರು ಬೆಳೆದು ಬಂದ ಹಿನ್ನೆಲೆಯ ಕಾರಣಕ್ಕೆ ಎಲ್ಲರಿಗೂ ಅವರದ್ದೇ ಆದ ಬೇರೆ ಬೇರೆ ರೀತಿಯ ಸಮಸ್ಯೆಗಳಿರುತ್ತವೆ. ಅಂಥಹ ಸಮಸ್ಯೆಗಳನ್ನು ಎದುರಿಸಲು ಅವರನ್ನ ದೈಹಿಕವಾಗಿ & ಮಾನಸಿಕವಾಗಿ ಸನ್ನದ್ಧು ಮಾಡುವ ಜವಾಬ್ಧಾರಿ ಸಮಾಜ ಮತ್ತು ಸರ್ಕಾರದ್ದು. ಯುವಜನರು ತಮ್ಮ ಗೊಂದಲ ಆತಂಕ, ಪರೀಕ್ಷಾ ಭಯ, ವೃತ್ತಿ ಮಾರ್ಗದರ್ಶನದ ಕೊರತೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಪ್ರತಿ ಕಾಲೇಜುಗಳಲ್ಲಿ ವೃತ್ತಿ ಮಾರ್ಗದರ್ಶನಕ್ಕೆಂದೆ ಪ್ರತ್ಯೇಕ ಸಿಬ್ಬಂಧಿ ನೇಮಕ ಮಾಡಬೇಕು. ಅವರ ಮಾನಸಿಕ ತೊಳಲಾಟಗಳನ್ನು ಆಲಿಸಲು ಕ್ರಿಡಾ ಮತ್ತು ಸಬಲೀಕರಣ ಇಲಾಖೆಯ ಮುಖೇನ ರಾಜ್ಯದ ಪ್ರತಿ ತಾಲೂಕಿನಲ್ಲೂ ಕನಿಷ್ಠ ಒಬ್ಬ ಆಪ್ತಸಮಾಲೋಚರನ್ನು ನೇಮಿಸಬೇಕು ಎಂದರು.
ಹಳ್ಳಿಯಿಂದ ಬರುವ ಯುವಜನರ ಪ್ರಯಾಣದ ಸಂಕಷ್ಟಗಳನ್ನು ಆಲಿಸಿದ ನಾಗೇಶ ಹರಳಯ್ಯ ಅವರು ಯುವಜನರ ಆರೋಗ್ಯದ ಸ್ಥಿತಿ ದಿನೆ ದಿನೇ ಕುಸಿಯುತ್ತಿದೆ. ಕಾಲೇಜು ಮಟ್ಟಗಳಲ್ಲಿ ಯುವಜನರಿಗೆ ಮಧ್ಯಾಹ್ನದ ಬಿಸಿ ಊಟ ನೀಡಬೇಕು. ಉತ್ತಮ ಆರೋಗ್ಯ ನಮ್ಮೆಲ್ಲರ ಸಂವಿಧಾನ ಬದ್ಧ ಹಕ್ಕು. ನಮ್ಮೆಲ್ಲರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಸರ್ಕಾರ ಆ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಯುವಮುನ್ನಡೆ ತಂಡದ ಸದಸ್ಯ ಮಧುಸೂದನ್ ಅಭಿಯಾನದ ಘೋಷಣೆಗಳನ್ನು ಕೂಗಿದರು. ರಾಧಿಕಾ ವಂದಿಸಿದರು. ಕಾಲೇಜಿನ 200 ಕ್ಕೂ ಹೆಚ್ಚು ಬಾಲಕಿಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಯುವಜನರ ಸಮಸ್ಯೆ, ಸವಾಲುಗಳು, ಮತ್ತು ಆರೋಗ್ಯದ ಕುರಿತು ಸಂವಾದದಲ್ಲಿ ಪಾಲ್ಗೊಂಡಿದ್ದರು.