ಕಲಬುರಗಿ: ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ ಅನುಭವ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಸೋಮವಾರ ಸಂಜೆ 7:15ರ ಸಮಯದಲ್ಲಿ ಇದ್ದಕ್ಕಿದ್ದಂತೆ ಭೂಮಿಯಿಂದ ವಿಚಿತ್ರ ಶಬ್ದ ಕೇಳಿಬಂದಿದೆ. ಭೂಮಿ ಕಂಪಿಸಿದ ಅನುಭವವೂ ಆಗಿದೆ. ಕಂಪನದ ಶಬ್ದ ಕೇಳಿ ಜನ ಹೊರಗೋಡಿ ಬಂದಿದ್ದಾರೆ. ಆತಂಕದಿಂದ ದಿಗಿಲುಗೊಂಡ ಜನ, ತಕ್ಷಣ ಮನೆಯೊಳಗೆ ಹೋಗಲು ಹಿಂದೇಟು ಹಾಕಿದ್ದಾರೆ.
ಭೂಮಿಯಿಂದ ವಿಚಿತ್ರ ಶಬ್ದದ ಜೊತೆಗೆ ಅಲುಗಾಡಿದ ಅನುಭವವಾಗಿದೆ ಎಂದು ವಾಡಿ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆಯೂ ಉತ್ಪಾದನೆ ಸ್ಥಗಿತಗೊಳಿಸಿದ್ದು, ಬ್ಲಾಸ್ಟಿಂಗ್ ಸಹ ನಿಂತಿದೆ.
ಹೀಗಿರಬೇಕಾದರೆ ಭಾರಿ ಸದ್ದು ಹೇಗೆ ಬಂತೆಂದು ಜನ ಆತಂಕಗೊಂಡಿದ್ದಾರೆ. ಕದ್ದುಮುಚ್ಚಿ ಕಂಪನಿ ಗಣಿಗಾರಿಕೆ ಆರಂಭಿಸಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಭಯಾನಕ ಸದ್ದಿನಿಂದ ಕೆಲಕಾಲ ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.