ಕಲಬುರಗಿ: ವಾಡಿ ರಸ್ತೆ ಅಪಘಾತಗಳಲ್ಲಿ, ಸರಕು ರೈಲುಗಳಲ್ಲಿ, ಕುಟುಂಬ ಬೆನ್ನಿಗೆ ಕಟ್ಟಿಕೊಂಡು ಸಾವಿರಾರು ಮೈಲಿ ನಡೆದು ಹಸಿವು ಬಳಲಿಕೆಯಿಂದ ವಲಸೆ ಕಾರ್ಮಿಕರು ಬೀದಿ ಹೆಣವಾಗುತ್ತಿದ್ದಾರೆ. ದುಡಿಯುವ ಜನಗಳ ದುರಂತ ಬದುಕಿಗೆ ಸಂತಾಪ ವ್ಯಕ್ತಪಡಿಸಬೇಕಾದ ಕೇಂದ್ರ ಬಿಜೆಪಿ ಸರ್ಕಾರ, ಕಲ್ಲಿದ್ದಲು ಮತ್ತು ಇಂಧನ ಕ್ಷೇತ್ರಗಳನ್ನು ಖಾಸಗಿಯವರಿಗೆ ತೆರೆದು ಲಾಭ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷ ಗಂಭೀರ ಆರೋಪ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಕೇಂದ್ರ ಬಿಜೆಪಿ ಸರ್ಕಾರ ಲಾಕ್ಡೌನ್ ಸಂಕಷ್ಟದ ಮಧ್ಯೆಯೂ ಕೃಷಿ ಮಾರುಕಟ್ಟೆಯಲ್ಲೂ ರೈತರನ್ನು ಹಾಗೂ ಗ್ರಾಹಕರನ್ನೂ ಶೋಷಣೆ ಮಾಡಲು ಕಾರ್ಪೊರೇಟ್ ಮತ್ತು ದೊಡ್ಡ ಉದ್ದಿಮೆಗಳಿಗೆ ಅವಕಾಶ ನೀಡಿದೆ. ಇದು ರೈತ-ಕಾರ್ಮಿಕರ ಶೋಷಣೆಗೆ ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸಿವು ಮತ್ತು ಉದ್ಯೋಗ ನಾಶಗಳಿಂದ ಜನರನ್ನು ಸರ್ಕಾರ ರಕ್ಷಿಸಬೇಕಾದ ಸಮಯ ಇದಾಗಿದೆ. ಆದರೆ ಸರ್ಕಾರ ಇಂತಹ ಸಂದರ್ಭದಲ್ಲಿ ರಕ್ಷಣೆ ಮತ್ತು ಶಸ್ತ್ರಾಸ್ತ್ರ ಉತ್ಪಾದನೆ ಮಾಡಲು ಮುಂದಾಗಿದೆ. ದೇಶವೆಂದರೆ ಅದರ ಪ್ರಜೆಗಳು. ದೇಶದ ಜನತೆ ಹಸಿವು ಬಳಲಿಕೆಗಳಿಂದ ಜೀವ ಬಿಡುವಾಗ, ಶಸ್ತ್ರಾಸ್ತ್ರಗಳು ಯಾರನ್ನು ರಕ್ಷಿಸುತ್ತವೆ? ಇದುವರೆಗೆ ಸರ್ಕಾರಗಳು ಹಲವಾರು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಿ, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟು ಕೋಟಿಗಟ್ಟಲೆ ಹಣ ಬಂದರೂ, ಅದು ಆರ್ಥಿಕತೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಆಡಳಿತ ನಡೆಸುವ ಹೆಸರಿನಲ್ಲಿ, ಒಂದೆಡೆ ದೇಶ ವಿದೇಶಗಳ ಬಂಡವಾಳಶಾಹಿಗಳನ್ನು ಕೊಬ್ಬಿಸುವ, ಅವರಿಗೆ ಅನಿಯಂತ್ರಿತ ಶೋ?ಣೆಗೆ ಅವಕಾಶ ನೀಡುವ ಕೆಲಸ ನಡೆಯುತ್ತಿದೆ. ಇನ್ನೊಂದೆಡೆ ಮಿಲಿಯಾಂತರ ಜನರು ಹಸಿವೆಯಿಂದ ಸಾಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.