ಕಲಬುರಗಿ: ಕೃಷಿ ವಿಜ್ಞಾನಕೇಂದ್ರಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಬೀಜಗಳಿಗೆ ಬೀಜೋಪಚಾರದ ಮಹತ್ವವನ್ನು ತಿಳಿಸುವುದಕ್ಕಾಗಿ ರೈತ ಬಾಂಧವರಿಗೆ ಬೀಜೋಪಚಾರದ ಪ್ರಾತ್ಷ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯಾದ ಡಾ. ಶ್ರೀನಿವಾಸ ಬಿ.ವಿ. ಮಾತನಾಡುತ್ತಾ, ರೈತ ಬಾಂಧವರು ಮುಂಗಾರು ಬಿತ್ತನೆಯ ಪೂರ್ವದಲ್ಲಿತಮ್ಮ ಹೊಲದ ಮಣ್ಣು ಮತ್ತು ನೀರಿನ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಪರೀಕ್ಷೆಯನ್ನುಮಾಡಿಸಿ ಮಣ್ಣು ಪರೀಕ್ಷೆಯ ವರದಿಯ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ನೀಡುವ ಮೂಲಕ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿ, ಹೆಸರು ಬೆಳೆಯ ಸುಧಾರಿತ ಬೇಸಾಯ ತಂತ್ರಜ್ಞಾನಗಳನ್ನು ವಿವರಿಸಿದರು.
ಸಸ್ಯರೋಗತಜ್ಞರಾದ ಡಾ.ಜಹೀರ್ ಅಹೆಮದ್ ಮಾತನಾಡಿ ವಿವಿಧ ಬೆಳೆಗಳಲ್ಲಿ ಬೀಜೋಪಚಾರದ ಮಹತ್ವ ಮತ್ತು ಅಗತ್ಯತೆಯನ್ನು ವಿವರವಾಗಿ ತಿಳಿಸಿದರು. ನಂತರ ಕೇಂದ್ರದ ಆವರಣದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಬೀಜೋಪಚಾರದ ಕ್ರಮಗಳನ್ನು ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿ ರವರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಾಗ ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಒತ್ತು ನೀಡಬೇಕಾಗಿ ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ವಾಸುದೇವ ನಾಯ್ಕ್, ಡಾ.ಮಂಜುನಾಥ ಪಾಟೀಲ್ ಡಾ.ಯುಸುಫ್ ಅಲಿ ನಿಂಬರಗಿ, ಸಿಬ್ಬಂದಿಗಳಾದ ನಾಗಿಂದ್ರ ಬಡದಾಳಿ, ಧನರಾಜ್, ನಿರಂಜನ್ಧನ್ನಿ, ಆನಂದಮ್ಮ, ಪುಟ್ಟರಾಜ, ಉಮಾಕಾಂತ, ದೇವಿದಾಸರವರು ಉಪಸ್ಥಿತರಿದ್ದರು.
ಸುಮಾರು ೨೦ ರೈತರು ತರಬೇತಿಯಲ್ಲಿ ಭಾಗವಹಿಸಿದರು.