3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವಲ್ಲಿ ವಿಫಲ: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

0
164

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿಗದಿಯಂತೆ ನಳದ ಮೂಲಕ ಮೂರು ದಿನಗಳಿಗೊಮ್ಮೆ ನಾಗರಿಕರಿಗೆ ಕುಡಿಯುವ ನೀರು ಪೂರೈಸದಿರುವುದಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿಯರ್‌ಗಳನ್ನು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಲಬುರಗಿ ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆದಿದ್ದ ಇಂಜಿನಿಯರ್ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಒಂದು ವೇಳೆ ಮೂರು ದಿನಗಳೊಳಗೆ ನೀರು ಪೂರೈಸಲು ವಿಫಲವಾದಲ್ಲಿ ೪ನೇ ದಿನವೇ ನೀರು ಬಿಡದಂತಹ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ನೀರು ಸರಬರಾಜು ಮಂಡಳಿಯಿಂದ ಪ್ರಸಕ್ತ ೫ ಟ್ಯಾಂಕರ್‌ಗಳಲ್ಲಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಅಭಾವ ಇರುವ ಇತರೆ ಪ್ರದೇಶಗಳಿಗೆ ಇನ್ನೂ ೫-೧೦ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನೀರು ಪೂರೈಕೆ ಮಾಡಬೇಕು. ಪ್ರತಿದಿನ ಒಂದು ಟ್ಯಾಂಕರ್‌ನಿಂದ ಕನಿಷ್ಠ ೫ ಟ್ರಿಪ್ ನೀರು ಸರಬರಾಜಾಗಬೇಕು ಎಂದು ಅವರು ಸೂಚಿಸಿದರು.  ಗುಲಬರ್ಗಾ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (ಜಿಮ್ಸ್ ಆಸ್ಪತ್ರೆ)ಯಲ್ಲಿ ನೀರಿನ ಸಮಸ್ಯೆಯ ದೂರುಗಳು ಭಾರೀ ಕೇಳಿ ಬರುತ್ತಿವೆ. ಪ್ರತಿದಿನ ಆಸ್ಪತ್ರೆಗೆ ೨ ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಈ ಪ್ರಮಾಣದಲ್ಲಿ ನೀರು ಪೂರೈಸಲಾಗುವುದಕ್ಕೆ ಕಾರಣಗಳೇನು ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಗೆ ನೀರು ಸರಬರಾಜು ಮಾಡಲು ವಿಫಲರಾದ ಅಧಿಕಾರಿಗಳ ವಿರುದ್ಧ ವರದಿ ಸಿದ್ಧಪಡಿಸಿ, ಅಮಾನತು ಮಾಡಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯಕ್ತರಾದ ಬಿ. ಫೌಜಿಯಾ ತರನ್ನುಮ್ ಅವರಿಗೆ ಸೂಚನೆ ನೀಡಿದರು.

ಭೀಮಾ ನದಿಯಿಂದ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕಲಬುರಗಿ ಮಹಾನಗರಕ್ಕೆ ನೀರು ಪೂರೈಕೆಯಾಗುತ್ತಿದೆ. ಆದರೆ, ನಿಗದಿಯಂತೆ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗುತ್ತಿದ್ದೀರಿ. ಈ ಸಮಸ್ಯೆಯಿಂದ ಜನರು ಪ್ರತಿಭಟನೆಯಂತಹ ಹಾದಿತುಳಿಯುವಂತಾಗಿದೆ. ಕೆಲವೆಡೆ ಹತ್ತು ದಿನಗಳಾದರೂ ನೀರು ಬರುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ತಮ್ಮ ಮೊಬೈಲಿಗೆ ಪ್ರತಿದಿನ ೧೫೦ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಜೊತೆಗೆ ಎಸ್‌ಎಂಎಸ್ ಕೂಡ ಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಫೋನ್ ಕರೆಗಳನ್ನು ಸ್ವೀಕರಿಸದೆ ನಿರ್ಲಕ್ಷ್ಯ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಕೆಂಡಾಮಂಡಲವಾದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ನಗರಕ್ಕೆ ನೀರು ಸರಬರಾಜಾಗುತ್ತಿರುವ ಪೈಪ್‌ಲೈನ್‌ನಲ್ಲಿ ಹೆಚ್ಚಿನ ಪ್ರಮಾಣದ ಲಿಕೇಜ್ ಇರುವುದರಿಂದ ನೀರು ಸರಬರಾಜು ಸಮಸ್ಯೆಗೆ ಕಾರಣವಾಗಿದೆ. ಈ ಲಿಕೇಜ್ ಅನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರಗಿಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ.ಪಾಟೀಲ್ ಅವರು ಮಾತನಾಡಿ, ವೀರೇಂದ್ರ ಪಾಟೀಲ್ ಬಡಾವಣೆಗೆ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಅಲ್ಲಿ ೮ ರಿಂದ ೧೦ ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಬೇರೆ ಬಡಾವಣೆಗಳಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇಲ್ಲ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಶಾಲೆಗಳು, ಕಾಲೇಜ್, ಹೊಟೇಲ್ ಸೇರಿದಂತೆ ವಾಣಿಜ್ಯ ಬಳಕೆಗೆ ನೀರು ಬಳಕೆಗೆ ಸದ್ಯ ಕಡಿವಾಣ ಹಾಕಿ ಸಾರ್ವಜನಿಕರಿಗೆ ಕುಡಿಯಲು ನೀರು ಪೂರೈಸುವುದೇ ಪ್ರಥಮಾದ್ಯತೆಯಾಗಬೇಕು. ಹಾಗೆಯೇ ಅಕ್ರಮವಾಗಿ ನಳಗಳಿಗೆ ಮೋಟಾರ್ ಅಳವಡಿಸಿ, ನೀರು ಪಡೆಯುವವರ ವಿರುದ್ಧ ಕಳವು ಕೇಸ್ ಹಾಕಬೇಕು. ಈ ನಿಟ್ಟಿನಲ್ಲಿ ತಂಡ ರಚಿಸಿ ಕಾರ್ಯಚರಣೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಶಾಖಾಧಿಕಾರಿ ಉಮೇಶ್ ಪಾಂಚಾಳ ಅವರ ವ್ಯಾಪ್ತಿಯಲ್ಲಿ ಬರುವ ಐವಾನ್-ಇ-ಶಾಹಿ, ಆದರ್ಶನಗರ, ಬಸವೇಶ್ವರ ನಗರ, ಶಕ್ತಿ ನಗರ, ಗೋ ತಾಯಿ ಬಡಾವಣೆಗಳಲ್ಲಿ ಹೆಚ್ಚಿನ ಕುಡಿಯು ನೀರಿನ ಸಮಸ್ಯೆ ಇದೆ. ಭೀಮಾ ನದಿಯಿಂದ ಅಗತ್ಯ ನೀರು ಪೂರೈಕೆಯಾದ್ರೂ, ಸರಿಯಾಗಿ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಲಯದ ಮುಖ್ಯ ಇಂಜಿನಿಯರ್ ಎಸ್.ಎನ್.ದಿನೇಶ್ ಅವರು ಮಾತನಾಡಿ, ಇಡೀ ನಗರದಲ್ಲಿ ಕಾರ್ಯನಿರ್ವಹಿಸಲು ಆರು ಕಾರ್ಯನಿರ್ವಾಹಕ ಇಂಜಿನಿಯರುಗಳ ಅಗತ್ಯವಿದೆ. ಆದರೆ, ಇಬ್ಬರು ಪ್ರಭಾರ ಸೇರಿ ನಾಲ್ಕು ಮಂದಿ ಇಂಜಿನಿಯರು ಮಾತ್ರ ಇದ್ದಾರೆ. ಜೊತೆಗೆ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ನೀಡದೆ ಇರುವುದು ಸಮರ್ಪಕ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ಕೊಡಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿಯರ್‌ಗಳು, ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here