ಸುರಪುರ: ಉದ್ಯೋಗಕ್ಕಾಗಿ ಸಿಂಧುತ್ವ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ಸಮಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ದಾಳಿ ನಡೆಸಿದಾಗ ಸಿಕ್ಕಿಬಿದ್ದ ಘಟನೆ ಗುರುವಾರದಂದು ಮದ್ಯಾಹ್ನ ನಡೆದಿದೆ.
ಇಲ್ಲಿನ ಬಿ.ಸಿ.ಎಂ. ಅಧಿಕಾರಿ ಬಾಬುರಾವ ಎಂಬುವರೇ ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿ ಆಗಿದ್ದಾರೆ, ಫಿರ್ಯಾದಿದಾರನಾದ ತಾಲೂಕಿನ ಬೈಲಾಪುರ ಗ್ರಾಮದ ಶಾಂತಗೌಡ ಎಂಬುವರು ಅವರ ತಮ್ಮನು ಕೆಎಸ್ಆರ್ಟಿಸಿ ಇಲಾಖೆಯಲ್ಲಿ ನೇಮಕಾತಿ ಹೊಂದಿದ್ದು ಕಾರಣ ಈತನ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಬಂದು ಕೇಳಿದಾಗ ಸಿಕ್ಕಿಬಿದ್ದ ಅಧಿಕಾರಿ ಬಾಬುರಾವ ಅವರು ಪ್ರಮಾಣ ಪತ್ರ ನೀಡಲು ೫ಸಾವಿರ ರೂ ಡಿಮ್ಯಾಂಡ್ ಮಾಡಿದ್ದರು ಎಂದು ತಿಳಿದು ಬಂದಿದ್ದು ಆಗ ಫಿರ್ಯಾದಿದಾರ ಶಾಂತಗೌಡ ೨ಸಾವಿರ ರೂ ಕೊಡುವುದಾಗಿ ಹೇಳಿ ನಂತರ ಈ ಕುರಿತು ಯಾದಗಿರಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದಾಗ ಇಂದು ಮದ್ಯಾಹ್ನದ ವೇಳೆಯಲ್ಲಿ ಎಸಿಬಿಯವರು ನಡೆಸಿದ ದಾಳಿಯಲ್ಲಿ ಲಂಚ ಪಡೆಯುತ್ತಿದ್ದಾಗ ಬಿಸಿಎಂ ಅಧಿಕಾರಿ ಬಾಬುರಾವ ಅವರು ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ಬಿ.ಬಿ.ಪಟೇಲ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಇನ್ಸಪೆಕ್ಟರ್ಗಳಾದ ಗುರುಪಾದ ಬಿರಾದಾರ, ರಾಘವೇಂದ್ರ ಹಾಗೂ ಸಿಬ್ಬಂದಿಗಳಾದ ವಿಜಯಕುಮಾರ, ಗುತ್ತಪ್ಪಗೌಡ, ಅಮರನಾಥ, ಮರೆಪ್ಪ ಹಾಗೂ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.