ಸುರಪುರ: ನಗರದ ಹಳೆ ತಹಸೀಲ್ ಕಚೇರಿ ಕಟ್ಟಡದಲ್ಲಿನ ಅಂಚೆ ಕಚೇರಿ ಕಟ್ಟಡ ಸೇರಿದಂತೆ ಅನೇಕ ಕಚೇರಿಗಳ ಕಟ್ಟಡದ ಮೇಲ್ಛಾವಣಿ ಕುಸಿಯುವ ಹಂತ ತಲುಪಿದ್ದರಿಂದ ಸಾರ್ವಜನಿಕರು ಭಯ ಪಡುವಂತಾಗಿದೆ.
ಸುರಪುರ ನಗರ ಉಪ ಅಂಚೆ ಕಚೇರಿ ಪಿಎಲ್ಡಿ ಬ್ಯಾಂಕ್ ಕಚೇರಿ ಹಾಗು ನ್ಯಾಯಾಲಯದ ಮತ್ತಿತರೆ ಕಚೇರಿಗಳಿಗೆ ಬೇಕಾಗುವ ಛಾಪಾ ಕಾಗದಗಳ ಮುದ್ರಾಂಕ ಕೆಲಸಗಾರರು ಕೂಡ ಇದೇ ಶಿಥಿಲಾವವಸ್ಥೆಯ ಕಟ್ಟಡದಡಿಯೆ ಕಾರ್ಯನಿರ್ವಹಿಸುತ್ತಿದ್ದುದರಿಂದ ಇಲ್ಲಿಗೆ ಬರುವ ಜನರು ಜೀವ ಭಯದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬೇಕಾಗಿದೆ.
ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಕೆಳಗಡೆ ಇರುವವರ ಮೇಲೆ ಆಗಾಗ ಉದುರಿ ಬೀಳುವ ಛಾವಣಿಯ ಸಿಮೆಂಟು ಮತ್ತಷ್ಟು ಭಯ ಹುಟ್ಟಿಸುತ್ತಿದೆ.ಇನ್ನು ಉಪ ಅಂಚೆ ಕಚೇರಿಯ ಛಾವಣಿಯು ಮಳೆಯಿಂದ ಸೋರುತ್ತಿದ್ದು ಗ್ರಾಹಕರು ಒಳಗಡೆ ಹೊಗಲು ಭಯ ಪಡುವಂತಾಗಿದೆ.ಅಲ್ಲದೆ ಕಚೇರಿಯಲ್ಲಿನ ಕಡತಗಳು ಹಾಗೆಯೇ ಇರುವುದರಿಂದ ಮಳೆ ನೀರು ಸೋರಿ ಕಡತಗಳು ಹಾಳಾಗುವ ಸಂಭವವಿದೆ.
ಇದನ್ನು ಕುರಿತು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಆನಂದ ವಿಶ್ವಕರ್ಮ ಬೇಸರ ವ್ಯಕ್ತಪಡಿಸಿ,ಈ ಕಟ್ಟಡ ಯಾವುದೇ ಸಂದರ್ಭದಲ್ಲಿ ಛಾವಣಿ ಕುಸಿದು ಬೀಳುವ ಹಂತದಲ್ಲಿದೆ,ಇಂತಹ ಕಟ್ಟಡದಲ್ಲಿಯೆ ಉಪ ಅಂಚೆ ಕಚೇರಿ ಕೆಲಸ ನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಅಲ್ಲದೆ ಪಕ್ಕದಲ್ಲಿ ಪಿಎಲ್ಡಿ ಬ್ಯಾಂಕ್ ಶಾಖೆ ಇದೆ, ಸಾರ್ವಜನಿಕರಿಗಾಗಿ ಟೈಪಿಂಗ್ ಕೇಂದ್ರಗಳನ್ನು ಕೂಡ ಇಲ್ಲಿಯೆ ನಡೆಸಲಾಗುತ್ತಿದೆ,ಆದರೆ ಇಲ್ಲಿಗೆ ಬರುವ ಜನರು ಯಾವುದೇ ಸಂದರ್ಭದಲ್ಲಿಯಾದರು ಅಪಾಯ ಹೆದರಿಸಬೇಕಾಗಲಿದೆ.
ಆದ್ದರಿಂದ ಸ್ಥಳಿಯ ಶಾಸಕರು ಮತ್ತು ತಹಸೀಲ್ದಾರರು ಹಾಗು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಇದರತ್ತ ಗಮನಹರಿಸಿ ಕಟ್ಟಡದ ದುರಸ್ಥಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.