ಕಲಬುರಗಿ: ಮುಂಗಾರು ಬೆಳೆ ಕೈಗೆಟುಕದ ಕಾರಣ ಮಾಡಿದ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕೊಂಚೂರು ಗ್ರಾಮದ ಭೀಮಾಶಂಕರ ಮಲ್ಲಪ್ಪ ನರಸಗೊಂಡ (೬೦) ಆತ್ಮಹತ್ಯೆಗೆ ಶರಣಾದ ರೈತ. ಮೃತ ರೈತನಿಗೆ ಪತ್ನಿ ಹಾಗೂ ನಾಲ್ವರು ಪುತ್ರರಿದ್ದಾರೆ. ಬೆಳೆಗೆ ಸಿಂಪರಣೆ ಮಾಡಲು ಮನೆಯಲ್ಲಿ ತಂದಿಡಲಾಗಿದ್ದ ಕೀಟನಾಶಕ ತೈಲವನ್ನು ಕುಡಿದು ದನದ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಕ್ಕಲುತನಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಾರ್ವಜನಿಕವಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದ ಎನ್ನಲಾಗಿದ್ದು, ಕಳೆದ ವರ್ಷ ಮತ್ತು ಈ ವರ್ಷ ಅತಿಯಾದ ಮಳೆಯಾದ್ದರಿಂದ ಬೆಳೆನಾಶವಾಗಿದ್ದರಿಂದ ಮನನೊಂದು ವಿಷ ಸೇವಿಸಿದ್ದಾನೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ರೈತ ಮೃತಪಟ್ಟಿದ್ದಾನೆ.
ಈ ಕುರಿತು ಮೃತ ರೈತನ ಪತ್ನಿ ಶರಣಮ್ಮ ನೀಡಿದ ದೂರಿನ ಮೇರೆಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ವಿಜಯಕುಮಾರ ಭಾವಗಿ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.