ಶಹಾಬಾದ:ತಾಲೂಕಿನಲ್ಲಿ ಮಂಗಳವಾರ ರಾತ್ರಿಯಿಂದ ಬೆಳಿಗ್ಗೆಯವರೆಗೆ ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಬ್ರಿಡ್ಜ ಸಂಪೂರ್ಣ ಮುಳುಗಿ ಸಂಚಾರ ವ್ಯವಸ್ಥೆ ಕಡಿತಗೊಂಡಿತ್ತು.ಅಲ್ಲದೇ ಗುರುವಾರವೂ ಅದೇ ಪರಿಸ್ಥಿತಿ ಮುಂದುವರೆದಿದೆ.
ಬುಧವಾರ ಮಳೆ ನೀರಿನಿಂದ ಕಾಗಿಣಾ ಸೇತುವೆ ಮುಳುಗಡೆಯಾದರೇ, ಗುರುವಾರ ಬೆಣ್ಣೆ ತೋರಾ ಹಾಗೂ ಚಂದ್ರಪಳ್ಳಿ ಜಲಾಶಯದಿಂದ ಹರಿಬಿಟ್ಟ ನೀರಿನಿಂದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಬ್ರಿಡ್ಜ ಸಂಪೂರ್ಣ ಮುಳುಗಿ ಸಂಚಾರ ವ್ಯವಸ್ಥೆ ಕಡಿತಗೊಂಡಿದೆ. ಹೆದ್ದಾರಿಯ ಮೇಲೆ ಎರಡು ಕಡೆ ನೂರಾರು ವಾಹನಗಳು ನಿಂತಿವೆ. ಎರಡು ದಿನಗಳಿಂದ ಲಾರಿ ಕಿನ್ನರ್ ಮತ್ತು ಡ್ರೈವರ್ಗಳು ಎಲ್ಲಿಯೂ ಹೋಗಲು ಆಗದೇ ತೊಂದರೆಗೆ ಒಳಗಾದರು. ರಸ್ತೆಯ ಮೇಲೆ ಅಡುಗೆ ತಯ್ಯಾರಿಸಿ ಆಹಾರ ಸೇವನೆ ಮಾಡುತ್ತಿರುವುದು ಕಂಡು ಬಂದಿತು.
ಇತ್ತ ನಗರದ ಅಜನಿ ಹಳ್ಳದ ಎರಡು ಸೇತುವೆ ಬುಧವಾರ ಮುಳುಗಿ ಹೋಗಿತ್ತು. ಗುರುವಾರ ಬೆಳಿಗ್ಗೆ ಸಂಪೂರ್ಣ ಇಳಿಮುಖವಾಗಿತ್ತು.ಆದರೆ ಕೇವಲ ಒಂದು ಗಂಟೆಯೊಳಗೆ ಮತ್ತೆ ಭೀಮಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಬಂದಿದ್ದು, ಕಾಗಿಣಾ ನದಿಯ ನೀರಿನ ಮೇಲೆ ಒತ್ತಡ ಉಂಟಾಗಿ ನೀರು ಹಿಂದಕ್ಕೆ ಸರಿದ ಪರಿಣಾಮ ಅಜನಿ ಹಳ್ಳದಲ್ಲಿ ನೀರು ಬಂದು ಎರಡು ಸೇತುವೆಗಳು ಮತ್ತೆ ಮುಳಗಲ್ಪಟ್ಟಿವೆ.ಇದರಿಂದ ಬೆಂಗಳೂರು- ಗುತ್ತಿ ಮಾರ್ಗ, ಯಾದಗಿರಿ, ಚಿತ್ತಾಪೂರ,ವಾಡಿ ಮಾರ್ಗದ ಸಂಚಾರ ವ್ಯವಸ್ಥೆ ಕಡಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಶಂಕರವಾಡಿ ಕಾಗಿಣಾ ಸೇತುವೆ ಮೇಲೆ ನೀರು ಸುಮಾರು ಒಂದು ಕಿ.ಮೀ ವರೆಗೆ ಆವರಿಸಿದನ್ನು ನೋಡಲು ಜನರು ನೀರಿನ ಹತ್ತಿರ ಬಂದು ಫೋಟೋ ತೆಗೆದುಕೊಳ್ಳುವುದು ಮಾಡುತ್ತಿರುವುದನ್ನು ಗಮನಿಸಿ, ಡಿವಾಯ್ಎಸ್ಪಿ ವೆಂನಗೌಡ ಪಾಟೀಲ, ಪಿಐ ಅಮರೇಶ.ಬಿ, ಪಿಎಸ್ಐ ತಿರುಮಲೇಶ ಹಾಗೂ ಸಿಬ್ಬಂದಿ ವರ್ಗದವರು ಮುಂಜಾಗೃತ ಕ್ರಮವಾಗಿ ಎಲ್ಲರಿಗೂ ಅಲ್ಲಿಂದ ತೆರಳುವಂತೆ ಮಾಡಿದರು. ನದಿಯ ಕಡೆಗೆ ಹೋಗದಂತೆ ಪೊಲೀಸರ ನಿಯೋಜನೆ ಮಾಡಿದರು.
ಬೆಳೆಗಳು ಹಾನಿ :ಬೆಣ್ಣೆತೊರಾ ಜಲಾಶಯದಲ್ಲಿ ಹೊರಬಿಟ್ಟ ನೀರಿನಿಂದ ತಾಲೂಕಿನ ಮುತ್ತಗಾ, ಭಂಕೂರ, ಶಂಕರವಾಡಿ, ಗೋಳಾ(ಕೆ),ಮಾಲಗತ್ತಿ, ಶಹಾಬಾದ, ಗೋಳಾ, ಹೊನಗುಂಟಾ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಹೆಕ್ಟೇರ್ ಬೆಳೆಗಳು ಹಾನಿಯಾಗಿವೆ.ಅಲ್ಲದೇ ಪಾಲಿಷ್ ಮಷಿನ್ಗಳಲ್ಲಿ ಮತ್ತು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಹಳೆಶಹಾಬಾದನಲ್ಲಿ ಸಂಪೂರ್ಣ ನೀರು ಇಳಿಮುಖವಾಗಿದೆ.