ಕಲಬುರಗಿ: ವಾಡಿ ರಕ್ಕಸ ಮಳೆಗೆ ಉಕ್ಕಿ ಹರಿದ ಭೀಮಾನದಿಯ ಪ್ರವಾಹಕ್ಕೆ ತುತ್ತಾದ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಕಡಬೂರ, ಕೊಲ್ಲೂರ ಹಾಗೂ ಸನ್ನತಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ ಖರ್ಗೆ, ನಿರಾಶ್ರಿತರ ಸ್ಥಿತಿಗತಿ ಪರಿಶೀಲನೆ ನಡೆಸಿದರು.
ವಿವಿಧ ಸೇತುವೆಗಳು ಮೂಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಕಲಬುರಗಿ-ಶಹಾಪುರ ಮಾರ್ಗವಾಗಿ ಕ್ಷೇತ್ರದ ಪ್ರವಾಹ ಪೀಡಿತ ಗ್ರಾಮಗಳನ್ನು ತಲುಪಿದ ಶಾಸಕ ಖರ್ಗೆ, ಜನರ ಅಳಲು ಅರಿತುಕೊಂಡರು.
ಅಪಾಯದ ಮಟ್ಟ ಮೀರಿ ರಭಸವಾಗಿ ಹರಿಯುತ್ತಿರುವ ಭೀಮಾ ನದಿಯ ದಂಡೆಯ ಕಡಬೂರ ಗ್ರಾಮವನ್ನು ಪ್ರವೇಶ ಪಡೆಯಲು ಸಾಧ್ಯವಾಗದೆ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಟ್ರ್ಯಾಕ್ಟರ್ ಮೂಲಕ ಗ್ರಾಮ ಪ್ರವೇಶ ಮಾಡಿದ ಪ್ರಿಯಾಂಕ್, ಅಕ್ಷರಶಃ ನೀರಿನಲ್ಲಿ ಮುಳುಗಿ ನಿಂತ ಮನೆಗಳನ್ನು ಮತ್ತು ಬಯಲಿಗೆ ಬಿದ್ದ ಬಡವರ ಬದುಕನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಗ್ರಾಮದ ಮಹಿಳೆಯರನ್ನು ನೇರವಾಗಿ ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದರು. ಶಾಸ್ವತವಾಗಿ ನಮ್ಮನ್ನು ನದಿ ದಂಡೆಯಿಂದ ಸ್ಥಳಾಂತರ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟರು.
ಇದಕ್ಕೆ ಪ್ರತಿಕ್ರೀಯಿಸಿದ ಪ್ರಿಯಾಂಕ್ ಖರ್ಗೆ, ನೀವೆಲ್ಲಾ ಒಮ್ಮತದ ನಿರ್ಧಾರ ಕೈಗೊಂಡರೆ ಕಡಬೂರ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಬದ್ಧ ಎಂದು ಭರವಸೆ ನೀಡಿದರು. ಅಲ್ಲದೆ ಸದ್ಯ ಜನರಿಗೆ ಯಾವೂದೇ ತೊಂದರೆಯಾಗದಂತೆ ಕ್ರಮೈಗೊಳ್ಳಲು ಮತ್ತು ಉಪಜೀವನಕ್ಕೆ ಬೇಕಾದ ಅಗತ್ಯ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ತಹಶೀಲ್ದಾರ ಉಮಾಕಾಂತ ಹಳ್ಳೆ ಅವರಿಗೆ ಸೂಚಿಸಿದರು.
ಬೇಜವಾಬ್ದಾರಿ ಸರಕಾರ-ಯೂಸ್ಲೆಸ್ ಎಂಪಿಗಳು: ವಿವಿಧ ಗ್ರಾಮಗಳ ಪ್ರವಾಹ ವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಖರ್ಗೆ, ಮಳೆಯ ರೌದ್ರಾವತಾರಕ್ಕೆ ರಾಜ್ಯದ ನದಿಗಳು ಭರ್ತಿಯಾಗಿವೆ. ಹಿಂದೆಂದೂ ಕಾಣದಂತಹ ಪ್ರವಾಹ ಭೀಮಾ ಮತ್ತು ಕಾಗಿಣಾ ತಡದಲ್ಲಿ ಉಂಟಾಗಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಬೆಳೆಗಳು ನಾಶವಾಗಿವೆ. ಜನರ ಬದುಕು ನೀರಿನಲ್ಲಿ ಮುಳುಗಿದೆ. ಜನ ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಕಣ್ಣಿರು ತರಿಸುತ್ತಿವೆ. ಇಷ್ಟಾದರೂ ಪ್ರವಾಹ ಪೀಡಿತ ರಾಜ್ಯಕ್ಕೆ ಕೇಂದ್ರರಿಂದ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ರಾಜ್ಯದ ಬಹುತೇಕ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಮೋದಿ ಸರಕಾರದಿಂದ ಹಣ ತರಲಾಗದ ಯೂಸ್ಲೆಸ್ ಎಂಪಿಗಳಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.
ಕೈಕಟ್ಟಿ ಕುಳಿತಿರುವ ಬಿಜೆಪಿ ಎಂಪಿಗಳಿಗೆ ಯಡಿಯೂರಪ್ಪನವರ ಮೇಲಿನ ಸಿಟ್ಟೋ ಅಥವ ಜನರ ಮೇಲಿನ ನಿಷ್ಕಾಳಜಿಯೋ ನನಗೆ ಅರ್ಥವಾಗುತ್ತಿಲ್ಲ. ಸಚಿವ ಆರ್.ಅಶೋಕ ಜಿಲ್ಲೆಗೆ ಬಂದು ಹತ್ತು ನಿಮಿಷವೂ ಕಳೆದಿಲ್ಲ. ಪ್ರವಾಹ ಸ್ಥಳಗಳನ್ನೂ ಸರಿಯಾಗಿ ವೀಕ್ಷಣೆ ಮಾಡದೆ ಹೊರಟು ಹೋದರು. ಸಂಸದರು ಮತ್ತು ಜಿಲ್ಲಾ ಉಸ್ತೂವಾರಿ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಬಿಜೆಪಿ ಸರಕಾರ ಕಲಬುರಗಿ ಜಿಲ್ಲೆಯನ್ನು ನಿರ್ಲಕ್ಷದಿಂದ ಕಾಣುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ತಹಶೀಲ್ದಾರ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದು ಅಣಬಿ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಅಧ್ಯಕ್ಷ ಜಗಣ್ಣಗೌಡ ಪಾಟೀಲ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಮುಖಂಡರಾದ ಜುಮ್ಮಣ್ಣ ಪೂಜಾರಿ, ಮಲ್ಲಯ್ಯ ಗುತ್ತೇದಾರ, ಸುಭಾಷ ಯಾಮೇರ, ಮಹ್ಮದ್ ಅಶ್ರಫ್ ಖಾನ್, ಮಹ್ಮದ್ ಗೌಸ್, ಸೂರ್ಯಕಾಂತ ರದ್ದೇವಾಡಿ, ಶರಣು ಕೆಂಚಗುಂಡಿ, ಶರಣಬಸಪ್ಪ ಪಸಾರ, ದಾವೂದ್ ಪಟೇಲ ಇದ್ದರು.