ಜೀವನ ಭದ್ರತೆಗೆ ಆಗ್ರಹಿಸಿ ಛಾಯಾಗ್ರಾಹಕರ ಪ್ರತಿಭಟನೆ

0
126

ವಾಡಿ: ಕೊರೊನಾ ಲಾಕ್‌ಡೌನ್ ಸಂಕಷ್ಟದಲ್ಲಿ ಸಿಲುಕಿ ಕರಾಳ ದಿನಗಳನ್ನು ಅನುಭವಿಸುತ್ತ ವ್ಯವಹಾರ ನಷ್ಟದಲ್ಲಿರುವ ಫೋಟೋಗ್ರಾಫರ್‌ಗಳು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯಮಟ್ಟದ ಸ್ಟೂಡಿಯೋ ಬಂದ್ ಕರೆಯನ್ನು ಬೆಂಬಲಿಸಿ ಪ್ರತಿಭಟನೆಗಿಳಿದ ಸ್ಥಳೀಯ ಛಾಯಾಚಿತ್ರಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳು ನಮ್ಮ ಕಷ್ಟ ಅರಿತು ಪರಿಹಾರ ಘೋಷಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

Contact Your\'s Advertisement; 9902492681

ಕ್ರೂರಿ ಕೊರೊನಾ ಸಾಂಕ್ರಾಮಿಕ ರೋಗ ಕಾಲಿಟ್ಟ ಗಳಿಗೆಯಿಂದ ಫೋಟೊ ಸ್ಟೂಡಿಯೋ ವ್ಯವಹಾರ ಸ್ಥಗಿತಗೊಂಡಿದೆ. ಛಾಯಾಚಿತ್ರ ತೆಗೆಯುವ ಕಾಯಕವನ್ನೇ ನೆಚ್ಚಿಕೊಂಡಿರುವ ನಮ್ಮ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸರಕಾರದ ಯೋಜನೆಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಿಲ್ಲ. ನಮ್ಮ ಬದುಕು ಸಂಪೂರ್ಣ ಬೀದಿಪಾಲಾಗಲು ಆಳುವ ಸರಕಾರಗಳೇ ಕಾರಣವಾಗಿವೆ ಎಂದು ಆಪಾದಿಸಿದರು.

ಕೋವಿಡ್-೧೯ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು. ಆರೋಗ್ಯ ಮತ್ತು ಜೀವ ವಿಮೆ, ಜಿಪಂ ಹಾಗೂ ಗ್ರಾಪಂ ಯೋಜನೆಗಳ ಛಾಯಾಗ್ರಹಣದ ಹಕ್ಕು ನೀಡಬೇಕು. ಸಬ್ಸೀಡಿಯಲ್ಲಿ ಬ್ಯಾಂಕ್ ಸಾಲ ನೀಡಬೇಕು. ಚುನಾವಣೆಯ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು. ಜೀವನ ಭದ್ರತೆ ಒದಗಿಸಬೇಕು.

ವೆಬ್ ಕ್ಯಾಮೆರಾ ತೊಗಲಗಬೇಕು. ಪ್ರತಿಭಾವಂತ ಛಾಯಾಚಿತ್ರಕಾರರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಕಾರ್ಮಿಕ ಇಲಾಖೆಯ ಯೋಜನೆಗಳಿಗೆ ನಮ್ಮನ್ನು ಫಲಾನುಭವಿಯನ್ನಾಗಿಸಬೇಕು. ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಬಸ್ ಮತ್ತು ರೈಲ್ವೆ ಪಾಸ್ ಸೌಲಭ್ಯ ಒದಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಷಿಯೇಷನ್‌ನ ನಗರ ಸಮಿತಿ ಅಧ್ಯಕ್ಷ ಶರಣಪ್ಪ ಹಡಪದ ಕುಂದನೂರ, ಉಪಾಧ್ಯಕ್ಷ ಭೀಮಣ್ಣ ಹವಾಲ್ದಾರ, ಕಾರ್ಯದರ್ಶಿ ಸಿದ್ರಾಮ ಕರದಳ್ಳಿ, ಸಹ ಕಾರ್ಯದರ್ಶಿ ಭೀಮರಾಯ ಭಂಡಾರಿ, ವಿಲಿಯಂ ಪ್ರಕಾಶ, ಸಂಜಯ ಚವ್ಹಾಣ, ಮಲ್ಲಿಕಾರ್ಜುನ ನಾಟೀಕಾರ, ವಿನಾಯಕ ಖೈರೆ, ಭೀಮರಾಯ ನರಿಬೋಳಿ, ಜಾರ್ಜ್ ಪ್ರಕಾಶ, ತೋಟೇಂದ್ರ ಸ್ವಾಮಿ, ಬಸವರಾಜ ಕರದಳ್ಳಿ, ಮೋಹನ ಮಾಲಗತ್ತಿ, ಶಣ್ಮುಖ ಕಟ್ಟಿಮನಿ, ರಾಜು ಗುತ್ತೇದಾರ, ಯಲ್ಲಣ್ಣ ಕಟ್ಟಿಮನಿ, ಸೋಮಶೇಖರ ಸೂಲಹಳ್ಳಿ, ಅಣವೀರಯ್ಯ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here