ಶಹಾಬಾದ:ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಬಂದರೆ ಅವರನ್ನು ಅಲೆದಾಡುವಂತೆ ಮಾಡದೇ, ಎಲ್ಲಾ ಕೆಲಸಗಳನ್ನು ಕಾನೂನಿನ ಅಡಿಯಲ್ಲಿ ಸರಳವಾಗಿ ಮಾಡಿಕೊಡಬೇಕೆಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವರು ಸೋಮವಾರ ನಗರಸಭೆಯಲ್ಲಿ ಆಯೋಜಿಸಲಾದ ಪ್ರಗತಿ ಪರಿಶೀಲನೆ ಮತ್ತು ನಗರಸಭೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಗರಸಭೆಯ ಎಲ್ಲಾ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರಬೇಕು.ಅಲ್ಲದೇ ಸಮಯಕ್ಕೆ ಸರಿಯಾಗಿ ತೆರಳಬೇಕು.ಸಾರ್ವಜನಿಕರು ಬಂದರೆ ಆಸೆ ಆಮಿಷಕ್ಕೆ ಒಳಗಾಗದೇ, ಹಾಗೂ ಅವರನ್ನು ಅಲೆದಾಡುವಂತೆ ಮಾಡಿದರೇ, ಅವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ.ನಗರದಲ್ಲಿ ನೈರ್ಮಲ್ಯ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಆರೋಗ್ಯ ನಿರೀಕ್ಷರ ಜವಾಬ್ದಾರಿ.ಸಾರ್ವಜನಿಕರ ದೂರುಗಳು ಬಂದ ತಕ್ಷಣವೇ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು.ನಗರದ ಸಾರ್ವಜನಿಕರಿಗೆ ಮೂಲಭೂತವಾಗಿ ನೈರ್ಮಲ್ಯ ಕಾಪಾಡಬೇಕು, ನೀರನ್ನು ಒದಗಿಸಿದರೇ ಅವರು ಹೆಚ್ಚಾಗಿ ನಗರಸಭೆಯ ಕಡೆಗೆ ಸುಳಿಯುವುದಿಲ್ಲ.ಆದರೆ ಬಹಳ ದಿನಗಳಿಂದ ನಗರದಲ್ಲಿ ಕೊಳವೆ ಬಾವಿಗಳು ಕೆಲಸ ಮಾಡುತ್ತಿಲ್ಲ.ಮೋಟಾರ್ ಕೆಟ್ಟು ಹೋಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿದ್ದೆನೆ.ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು.ಜನರು ಯಾವುದೇ ಸಮಸ್ಯೆ ತೆಗೆದುಕೊಂಡು ಬರದ ಹಾಗೇ ಕ್ರಮಕೈಗೊಳ್ಳುವತ್ತ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.ಅಲ್ಲದೇ ಸಮಯಕ್ಕೆ ಸರಿಯಾಗಿ ಕರ ವಸೂಲಾತಿಗೆ ಕ್ರಮಕೈಗೊಳ್ಳಬೇಕೆಂದು ಕಂದಾಯ ಅಧಿಕಾರಿಗೆ ತಿಳಿಸಿದರು.
ಅಲ್ಲದೇ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಕೆಟ್ಟು ಹೋಗಿದ್ದು, ರಸ್ತೆ ನಿರ್ಮಾಣದ ಕಡೆಗೆ ಗಮನಹರಿಸಬೇಕು. ನಗರೋತ್ಥಾನ ಮೂರನೇ ಹಂತದ ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ಗುತ್ತಿಗೆದಾರರು ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಹಾಗೂ ಎಸ್ಸಿಪಿಮತ್ತು ಟಿಎಸ್ಪಿ ಯೋಜನೆಯ 20 ಕೋಟಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಯಾವ ಹಂತದಲ್ಲಿವೆ.ಅದನ್ನು ಬೇಗನೆ ಕಾಮಗಾರಿ ಮಾಡುವತ್ತ ಕ್ರಮಕೈಗೊಳ್ಳಬೇಕು.ಕಾಮಗಾರಿ ಕೈಗೊಳ್ಳದಿದ್ದರೇ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ ಮೆಹಬೂಬ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಇಇ ಪುರೋಷತ್ತಮ, ಕಚೇರಿ ವ್ಯವಸ್ಥಾಪಕ ಶಂಕರ ಇಂಜನಗೇರಿ, ಕಂದಾಯ ಅಧಿಕಾರಿ ಸುನೀಲಕುಮಾರ, ಜೆಇ ಬಸವರಾಜ, ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ, ಸಾಯಿಬಣ್ಣ ಸುಂಗಲಕರ್,ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಶರಣು, ರಾಜೇಶ ಇತರರು ಇದ್ದರು.