ಕಲಬುರಗಿ: ಭಾರತ ನನ್ನದೇ ಎಂದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತೆ ಮಾಡಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹೇಳಿದರು.
ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 71ನೇ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸಿ ನಾವೆಲ್ಲರೂ ಇಲ್ಲಿ ಗೌರವಯುತವಾದ ಸ್ವಾಭಿಮಾನಿ ಬದುಕಿಗೆ ಸಂವಿಧಾನ ದಾರಿ ದೀಪವಾಗಿದ್ದು, ನಾವು ಸಂವಿಧಾನದ ಘನತೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬದುಕುವುದು ನಮ್ಮ ಮೊಟ್ಟಮೊದಲ ಜವಾಬ್ದಾರಿಯಾಗಿದೆ ಎಂದರು.
ಯುವ ಮುಖಂಡ ಆನಂದ ಇಂಗಳಿಗೆ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರು ಎರಡು ಸಲ ಲೋಕಸಭೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಪಕ್ಷ ಅವರನ್ನು ಕುತಂತ್ರದಿಂದ ಸೋಲಿಸಿತು. ಶೋಷಿತರ, ಜನಸಾಮಾನ್ಯರ ಧ್ವನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾವಿನಲ್ಲೂ ಸಹನೆ ತೋರಿಸದ ಆಗಿನ ಕಾಂಗ್ರೆಸ್ ಸರ್ಕಾರ, ದಲಿತ ವಿರೋಧಿ ತನದಿಂದಾಗಿ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಟಿಕೆಟ್ ನೀಡಲಿಲ್ಲ, ಆದರೆ ಬಿಜೆಪಿ ಪಕ್ಷ ನಮ್ಮ ಪರವಾಗಿರುವುದಕ್ಕೆ ನಮ್ಮ ಪ್ರಧಾನಿ ಮೋದಿಜಿ ಅವರ ಸಂವಿಧಾನದ ಆಶಯಗಳ ಆಡಳಿತವೇ ಸಾಕ್ಷಿ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಗಳಾದ ನಿವೇದಿತ ದಹಿಯಾಂಡೆ, ಯುವ ಮುಖಂಡರಾದ ವಿಠಲ ನಾಯಕ ಅವರು ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಕ್ಷದ ಮುಖಂಡರಾದ ದೌಲತ್ ರಾವ್ ಚಿತ್ತಾಪುರಕರ್ ಸಂಗಣ್ಣ ಇಂಡಿ, ಸಂತೋಷ್ ರಾಠೋಡ್, ಸತೀಶ್ ಸೇರಿದಂತೆ ಇತರರು ಇದ್ದರು.