ಅಪರ ಜಿಲ್ಲಾಧಿಕಾರಿಗಳು, ವಾರ್ತಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ

0
49

ಕಲಬುರಗಿ : ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲು ನವೆಂಬರ್ 30ರಿಂದ ಸಕಾಲ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕರಾದ ಡಾ. ಬಿ.ಆರ್.ಮಮತಾ ಅವರು ತಿಳಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ವತಿಯಿಂದ ನಡೆಯುತ್ತಿರುವ ಸಕಾಲ ಸಪ್ತಾಹ ಕುರಿತು ಅವರು ಎಲ್ಲಾ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ರಾಜ್ಯದ ಮುಖ್ಯಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಈ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಮೂರು ಹಂತದಲ್ಲಿ ಇದನ್ನು ಆಚರಿಸಲಾಗುತ್ತಿದೆ. ಇದೇ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಡಿಸೆಂಬರ್ 7 ರಿಂದ 11 ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಡಿ. 14ರಿಂದ 19ವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ಸಪ್ತಾಹವನ್ನು ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಪ್ತಾಹದಲ್ಲಿ ಕಾರ್ಯಕ್ರಮಗಳು: ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಸರ್ಕಾರದ ಸೇವೆಗಳನ್ನು ವಿಳಂಬವಿಲ್ಲದೆ, ಕಾಲಮಿತಿಯೊಳಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2012 ರಲ್ಲಿ ಜಾರಿಗೆ ತರಲಾಗಿದ್ದು, ಸಕಾಲ ಯೋಜನೆಯಡಿ ಒಟ್ಟು 98 ಇಲಾಖೆ/ಸಂಸ್ಥೆಗಳ 1025 ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ಈವರೆಗೆ 22,88,81,652 ಅರ್ಜಿಗಳನ್ನು ಸ್ವೀಕರಿಸಿ 22,82,55,866 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದು ಅವರು ಅಂಕಿ-ಅಂಶಗಳ ವಿವರ ನೀಡಿದರು.

ನೋಡಲ್ ಅಧಿಕಾರಿಗಳ ನೇಮಕ: ಸಪ್ತಾಹದ ಹಿನ್ನೆಲೆಯಲ್ಲಿ ಸಕಾಲ ಮಿಷನ್‍ನ ಮೂವರು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕಂದಾಯ ಇಲಾಖೆಗೆ ಆಡಳಿತಾಧಿಕಾರಿ ಮೇಘನಾ. ಜಿ, ಆಹಾರ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ವಿಶೇಷಾಧಿಕಾರಿ ಮಮತಾ ದೇವಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಆಡಳಿತಾಧಿಕಾರಿ ಸೀಮಾ ಬಿ, ನಾಯಕ್ ಅವರನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ ತಂಡ ರಚನೆ: ಸಪ್ತಾಹದ ಬಗ್ಗೆ ಪರಿವೀಕ್ಷಣೆ ನಡೆಸಲು ಆಯಾ ಜಿಲ್ಲೆಯಲ್ಲಿ ನಾಲ್ಕು ಅಧಿಕಾರಿಗಳ ತಂಡಗಳನ್ನು ರಚಿಸಬೇಕು. ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿವೀಕ್ಷಿಸುವ ದಿನಾಂಕಗಳ ಪಟ್ಟಿ ತಯಾರಿಸಿ ನಾಳೆಯೊಳಗೆ ಸಲ್ಲಿಸಬೇಕು. ಅಷ್ಟೆಯಲ್ಲ, ಅಪರ ಜಿಲ್ಲಾಧಿಕಾರಿಗಳು ಸಹ ಸಕಾಲ ವ್ಯಾಪ್ತಿಯಲ್ಲಿ ಬರುವ ಕಚೇರಿಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳ ಭೇಟಿ ಮತ್ತು ಪರಿವೀಕ್ಷಣೆಯ ವರದಿಯನ್ನು ಪ್ರತಿನಿತ್ಯ ಸಕಾಲ ಮಿಷನ್‍ಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ನಾಗರಿಕರಿಗೆ ಪ್ರಯೋಜನಗಳು: ಸಕಾಲ ಅರ್ಜಿದಾರರು 15 ಅಂಕಿಯ ಜಿಎಸ್‍ಸಿ ಸಂಖ್ಯೆಯೊಂದಿಗೆ ಸ್ವೀಕೃತಿಯನ್ನು ಪಡೆಯುತ್ತಾರೆ. ಅರ್ಜಿಯ ಹಂತವನ್ನು ನಾಗರಿಕರು ತಮ್ಮ ನೊಂದಾಯಿತ ಮೊಬೈಲ್‍ನಲ್ಲಿ ಪಡೆಯುತ್ತಾರೆ. ಜಿಎಸ್‍ಸಿ ಸಂಖ್ಯೆಯನ್ನು ಬಳಸಿ ಅರ್ಜಿಯ ಹಂತವನ್ನು WWW.sakala.kar.nic.in ಹಾಗೂ 080-44554455 ಮುಖೇನ ತಿಳಿಯಬಹುದಾಗಿದೆ. ಸೇವಾ ವಿತರಣೆಯಲ್ಲಿ ವಿಳಂಬ ಅಥವಾ ಸಮರ್ಥನೀಯವಲ್ಲ, ತಿರಸ್ಕøತ ಸಂದರ್ಭಗಳಲ್ಲಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಕಲಬುರಗಿಯ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೊಂದಣಾಧಿಕಾರಿ ಬಿ. ಶ್ರೀಕಾಂತ್, ಆಹಾರ ಇಲಾಖೆ ಮ್ಯಾನೇಜರ್ ಅಲ್ಲಬಕಾಷ್, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿರಸ್ತೇದಾರ್ ದೇವಮ್ಮ.ಟಿ, ಆಧಾರ್ ಜಿಲ್ಲಾ ಸಂಯೋಜಕರಾದ ಆನಂದ, ಸೇವಾಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ್ ಬಡಗಿ, ಸಕಾಲದ ಜಿಲ್ಲಾ ಮಾಹಿತಿ ಸಮಾಲೋಚಕರು ಶ್ರೀಮತಿ ವಿದ್ಯಾ ದೇವಾಪುರ ಇನ್ನಿತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here