ಸುರಪುರ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಶಿಕ್ಷಕರು ಹಾಗು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ವ್ಯಕ್ತಿಗಳಾದ ರಂಗಂಪೇಟೆಯ ನಿವಾಸಿ ಪ್ರಹ್ಲಾದ ರಾವ್ ಕುಳಗೇರಿಯವರನ್ನು ಸನ್ಮಾನಿಸಲಾಯಿತು.
ಕಸಾಪ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿಯವರು ಪ್ರಹ್ಲಾದರಾವ್ ಕುಳಗೇರಿಯವರನ್ನು ಸನ್ಮಾನಿಸಿ ಮಾತನಾಡಿ,ನಮ್ಮ ನಡುವಿನ ಹಿರಿಯರಲ್ಲಿ ಪ್ರಹ್ಲಾದರಾವ್ ಕುಳಗೇರಿಯವರು ಒಬ್ಬರಾಗಿದ್ದಾರೆ.ಇವರು ಶಿಕ್ಷಕ ವೃತ್ತಿಯಲ್ಲಿರುವ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.ಇವರು ಕೈಯಲ್ಲಿ ಅಕ್ಷರ ಕಲಿತ ಅನೇಕರು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.ಅಲ್ಲದೆ ಇವರು ಕೇವಲ ಶಿಕ್ಷಕರು ಮಾತ್ರವಲ್ಲದೆ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಮೂಲಕ ದೇಶಪ್ರೇಮವನ್ನು ಮೆರೆದಿದ್ದಾರೆ.ಇಂತಹ ಒಬ್ಬ ಅಪರೂಪದ ವ್ಯಕ್ತಿ ಇಂದು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು,ಅವರನ್ನು ಇಂದು ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಿವೃತ್ತ ಶಿಕ್ಷಕ ಪ್ರಹ್ಲಾದರಾವ್ ಕುಳಗೇರಿಯವರ ಸುಪುತ್ರ ಡಾ:ಸುಧೀರ ಕುಳಗೇರಿ ಮಾತನಾಡಿ,ಇವರ ದೇಶ ಸೇವೆಯನ್ನು ಅರಿತು ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿಸುವುದಾಗಿ ಮುಂದೆ ಬಂದಿದ್ದರು,ಆದರೆ ನನಗೆ ರಾಜಕೀಯ ಬೇಡ ಬೇರೆ ಆಸಕ್ತಿಯುಳ್ಳವರಿಗೆ ಕೊಡುವಂತೆ ನಯವಾಗಿ ತಿರಸ್ಕರಿಸಿದರು ಎಂದು ಅವರ ಪ್ರಾಮಾಣಿಕತೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಹ್ಲಾದರಾವ್ ಕುಳಗೇರಿಯವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.ಉಪೇಂದ್ರ ಹಾಲಗೇರಿ ಜಹಾಗೀರದಾರ ರಾಘವೇಂದ್ರ ಭಕ್ರಿ ಶ್ಯಾಮಲಾಬಾಯಿ ಪಲ್ಲವಿ ಹಾಗು ಪ್ರಹ್ಲಾದರಾವ್ ಕುಳಗೇರಿಯವರ ಕುಟುಂಬಸ್ಥರಿದ್ದರು.