ವಾಡಿ: ಸಾಂಸ್ಕೃತಿಕ ಅಧಃಪತನ ಉಂಟಾಗಿ ಸಮಾಜದಿಂದ ಕಣ್ಮರೆಯಾಗುತ್ತಿರುವ ಮಾನವ ಮೌಲ್ಯಗಳು ಉಳಿಯಬೇಕೆಂದಾದರೆ ಈ ನೆಲದಲ್ಲಿ ಸಾಂಸ್ಕೃತಿಕ ಚಳುವಳಿಗಳು ಗಟ್ಟಿಗೊಳ್ಳಬೇಕು ಎಂದು ಚಿಂತಕ, ಬರಹಗಾರ ವಿವೇಕಾನಂದ ಎಚ್.ಕೆ ಹೇಳಿದರು.
ಬೀದರ ದಿಂದ ರಾಜ್ಯಾದ್ಯಂತ ಆರಂಭಿಸಿರುವ ತಮ್ಮ ಜ್ಞಾನಭಿಕ್ಷಾ ಪಾದಯಾತ್ರೆ ಮಂಗಳವಾರ ವಾಡಿ ನಗರಕ್ಕೆ ತಲುಪಿ ೩೦ ದಿನಗಳು ಕಳೆದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ವಿವೇಕ್, ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ಸಮಾಜಿಕ ಅಸಮಾನತೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶರಣರ ನಾಡು ಎಂದು ಹೇಳಿಕೊಳ್ಳುವ ಬೀದರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ನಮ್ಮ ಯುವಶಕ್ತಿ ರಾಜಕೀಯವಾಗಿ ದುರ್ಬಳಕೆಯಾಗುತ್ತಿದೆ. ನೀತಿ ನೈತಿಕತೆಗಳ ಮೇಲೆ ಸವಾರಿ ನಡೆಯುತ್ತಿದ್ದು, ಆಟವಾಡುವ ಹುಡುಗರು ಎಲ್ಲೂ ಕಾಣುತ್ತಿಲ್ಲ. ದೇಶದ ಭವಿಷ್ಯವಾಗಿರುವ ಯುವಕರ ಆರೋಗ್ಯಕ್ಕಾಗಿ ಉತ್ತಮ ಕ್ರೀಡಾಂಗಣ ಮತ್ತು ಗ್ರಂಥಾಲಯಗಳಿಲ್ಲದಿರುವುದು ಕಂಡಿದ್ದೇನೆ. ಅದು ಗಂಡು ಮೆಟ್ಟಿದ ನಾಡು ಇದು ಶರಣರ ನಾಡು ಎಂದು ಒಣಜಂಭಕೊಚ್ಚಿಕೊಂಡರೆ ಸಾಲದು. ಶರಣ ತತ್ವಗಳ ಜಾಗೃತಿ ಪ್ರತಿಭೆಗಳು ಉದಯಿಸಬೇಕು. ಹೋರಾಟದ ತಾಕತ್ತಿಲ್ಲದ್ದು ಮತ್ತು ಚಿಂತನಗಳಿಲ್ಲದ್ದು ಅದು ನಾಡಲ್ಲ. ನಾಡಿನಲ್ಲಿ ಸಾಂಸ್ಕೃತಿ ಹೋರಾಟ ಮರುಹುಟ್ಟು ಪಡೆಯಬೇಕು ಎಂದರು.
ನಾನು ನಾಲ್ಕು ಜನರನ್ನು ಗುರಿಯಾಗಿಟ್ಟುಕೊಂಡು ರಾಜ್ಯದಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು, ಮಠಾದೀಶರು ಹಾಗೂ ಪತ್ರಕರ್ತಕರು ಈ ನಾಲ್ಕು ಜನರೇ ಈ ಸಮಾಜವನ್ನು ಹಾಳುಮಾಡಿದ್ದಾರೆ. ಇವರ ಎಲ್ಲಾ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಇವರು ವಿವೇಚನೆ ಕಳೆದುಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಸಬೇಕಿದೆ. ಮನುವಾದದ ವಿರುದ್ಧ ಬರೆದು ಜನ ಹೋರಾಟಗಳಿಗೆ ಶಕ್ತಿ ಕೊಟ್ಟವರು. ಜನಪರ-ಪ್ರಗತಿಪರ ಎಂದು ಹೇಳುತ್ತಲೇ ಮತ ಹಾಕಿಸಿಕೊಂಡವರು ಈಗ ಬಿಜೆಪಿ ಪಕ್ಷದಲ್ಲಿ ಭಜನೆ ಮಾಡುತ್ತಿರುವವರಿಗೆ ಏನು ಹೇಳಬೇಕು.
ವರವರ ಅನುಕೂಲಕ್ಕೆ ತಕ್ಕಂತೆ ಪಕ್ಷ ಬದಲಾಯಿಸಿ ಜನರನ್ನು ದಾರಿ ತಪ್ಪಿಸಿದರೆ ನೊಂದ ಜನಗಳು ಯಾವ ಭರವಸೆ ಇಟ್ಟುಕೊಳ್ಳಬೇಕು? ಹೇಳಿ ಎಂದು ಬೇಸರ ವ್ಯಕ್ತಪಡಿಸಿದರು. ಇವರೆಲ್ಲರೂ ಕೇವಲ ಹೊಟ್ಟೆಪಾಡು ಎಂದುಕೊಂಡು ಹೋದರೆ ಸಮಾಜವನ್ನು ಉಳಿಸುವವರು ಯಾರು ಎಂಬುದನ್ನು ಪ್ರಶ್ನಿಸಿಬೇಕಿದೆ. ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣ ಉಚಿತವಾಗಿ ಲಭ್ಯವಾಗಬೇಕು ಎಂಬ ಬೇಡಿಕೆಯಿಟ್ಟು ಹೋರಾಡುವ ಅಗತ್ಯವಿದೆ ಎಂದು ವಿವರಿಸಿದರು.
ಮುಖಂಡರಾದ ಶ್ರವಣಕುಮಾರ ಮೌಸಲಗಿ, ವೀರಣ್ಣ ಯಾರಿ, ಖೆಮಲಿಂಗ ಬೆಳಮಗಿ, ದಯಾನಂದ ಕಜೂರಿ ಇದ್ದರು.