ಕಲಬುರಗಿ: ಡಾ.ಬಾಬಾಸಾಹೇಬ್ ಅಂಬೇಡರ್ ಅವರ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ. ದಮನಿತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಪಶು-ಪಕ್ಷಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಶೋಷಿತ,ದಲಿತ ವರ್ಗಕ್ಕೆ ಶಿಕ್ಷಣ, ಸಂಘಟನೆ, ಹೋರಾಟದ ತತ್ವ ಹಾಗೂ ಸರ್ವ ನ್ಯಾಯಕ್ಕಾಗಿ ಸಂವಿಧಾನವನ್ನು ನೀಡಿ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಬಾಬಾಸಾಹೇಬರ್ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲವೆಂದು ಹಿರಿಯ ಸಮಾಜ ಸೇವಕ ನಾಗೇಂದ್ರಪ್ಪ ದಂಡೋತಿಕರ್ ಹೇಳಿದರು.
ಅವರು ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ೬೪ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ವರ ಸರಡಗಿ ಮಾತನಾಡಿ, ಡಾ.ಅಂಬೇಡ್ಕರ ಅವರು ಒಬ್ಬ ವ್ಯಕ್ತಿಯಲ್ಲ. ಬದಲಿಗೆ ದೇಶದ ದೊಡ್ಡ ಶಕ್ತಿಯಾಗಿದ್ದಾರೆ. ಅಂಬೇಡ್ಕರ ಎಂಬ ಶಕ್ತಿ ಇರುವದರಿಂದಲೇ ದೇಶದಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಎಲ್ಲರಿಗೂ ಸಮಾನತೆ, ನ್ಯಾಯವನ್ನು ಒದಗಿಸಿಕೊಟ್ಟ ಮಹಾಮಾನವತಾವಾದಿಯಾಗಿದ್ದಾರೆ. ಅವರನ್ನು ಪುಸ್ತಕದಿಂದ ತಿಳಿದುಕೊಳ್ಳದೆ ಹೃದಯದಿಂದ ಅರಿತುಕೊಂಡರೆ ಬಾಬಾಸಾಹೇಬರು ಹೆಚ್ಚು ಅರ್ಥವಾಗುತ್ತಾರೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಾಲಕೃಷ್ಣ ಕುಲಕರ್ಣಿ, ರಾಜೇಶ ನಾಗಬುಜಂಗೆ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಶ್ರೀನಿವಾಸ ಬುಜ್ಜಿ, ಚಂದ್ರಕಾಂತ ತಳವಾರ, ಕೆ.ಎಂ.ಲೋಕಯ್ಯ, ರವೀಂದ್ರ ಗುತ್ತೇದಾರ, ಮಲ್ಲಣ್ಣ ಮಲ್ಲೇದ, ಹಣಮಂತರಾಯ ಪಾಟೀಲ, ಶಿವಕುಮಾರ, ರಾಮು ಸೇರಿದಂತೆ ಮತ್ತಿತರರಿದ್ದರು.