ಬೆಂಗಳೂರು: ನಮ್ಮ ರಾಜ್ಯದಲ್ಲಿ ಐ.ಟಿ. ಕ್ಷೇತ್ರವು ಪ್ರಗತಿ ಹೊಂದಿದೆ. ವರ್ಚುವಲ್ ರೂಪದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಸುಮಾರು 3099 ಸಂಸ್ಥೆಗಳು ಕಂಪನಿಗಳು ಭಾಗವಹಿಸಿದ್ದವು. ವಿಶ್ವ ಮಟ್ಟದಲ್ಲಿ ಐ.ಟಿ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯಲು ಸರ್ಕಾರ ಹಾಗೂ ಉದ್ಯಮಿಗಳು ಶ್ರಮ ಪಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ್ ಸಿ.ಎನ್. ಅವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ನಡೆದ ಕಾರ್ಯಕಲಾಪದಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಟಕ್ ಸಮ್ಮಿಟ್ನಲ್ಲಿ ಎಷ್ಟು ಕಂಪನಿಗಳು ಭಾಗವಹಿಸಿದ್ದವು. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಹಾಗೂ work from home ಕೆಲಸವನ್ನು ಐ.ಟಿ ಕ್ಷೇತ್ರದವರು ಮಾಡುತ್ತಿರುವುದರಿಂದ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ವಿಧಾನಸಭೆಯ ಸದಸ್ಯರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕೋವಿಡ್ ಸಮಸ್ಯೆಯನ್ನು ಎದುರಿಸಿ ಕೆಲಸವನ್ನು ಐ.ಟಿ ಕಂಪನಿಗಳು ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಕರೋನ ಸಮಸ್ಯೆಯಿರುವದರಿಂದ ಐ.ಟಿ ಕಂಪನಿಗೆ ಕಛೇರಿಯಲ್ಲಿಯೇ ಕೆಲಸ ನಿರ್ವಹಿಸಿ ಎಂದು ಒತ್ತಡ ಕೊಡಲು ಸಾಧ್ಯವಿಲ್ಲ. ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತದೆ. ಎಂದು ಸಚಿವರು ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್-2020 ತಾಂತ್ರಿಕ ಸಮಾವೇಶವು “Next is Now” ಎಂಬ ಧ್ಯೇಯೋದ್ದೇಶದೊಂದಿಗೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಂತ್ರಿಕತೆಯಲ್ಲಿ ಆವಿಷ್ಕಾರ, ನಾವೀನ್ಯತೆಯನ್ನು ರಚಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪೂರಕ ವಾತಾವರಣ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸಮಾವೇಶಗೊಂಡಿತ್ತು ಎಂದು ತಿಳಿಸಿದರು.