ಶಹಾಬಾದ:ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರಾಗಿದ್ದರು ಎಂದು ದೈಹಿಕ ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.
ಅವರು ಸೋಮವಾರ ನಗರದ ರಾಷ್ಟçಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ, ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದೊದಗಿದಾಗ, ವಚನಗಳ ಸಂರಕ್ಷಣೆಗೆ ಮುಂದಾದ ಧೀರ ಗಣಾಚಾರಿ ಮಾಚಿದೇವರು. ಶರಣರು ತಮ್ಮ ವಿಚಾರಗಳನ್ನು, ಚಿಂತನೆಗಳನ್ನು, ಪ್ರಗತಿಪರ ಆಲೋಚನೆಗಳನ್ನು ವಚನಗಳಲ್ಲಿ ನಿರ್ಭಿಡೆಯಿಂದ ದಾಖಲಿಸಿದ್ದರು. ವಚನಗಳು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿ ತಲುಪಲು ಅವುಗಳ ಸಂರಕ್ಷಣೆ ಅತ್ಯಗತ್ಯವಾಗಿತ್ತು. ಹೀಗಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅವುಗಳನ್ನು ಒಂದೆಡೆ ಕ್ರೋಢೀಕರಿಸಿ, ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಸಾಹಿತ್ಯ ಉಳಿಸಲು ಮಡಿವಾಳ ಮಾಚಿದೇವರು ಖಡ್ಗ ಹಿಡಿಯಬೇಕಾಯಿತು, ರಣರಂಗಕ್ಕೆ ಧುಮುಕ ಬೇಕಾಯಿತು.
ಜನಪದಿಗರಂತೂ ಮಾಚಿದೇವರ ನಿಷ್ಠೆ, ಭಕ್ತಿ, ಬದ್ಧತೆಯನ್ನು ಕೊಂಡಾಡಿದ್ದಾರೆ. ಮಾಚಿದೇವರ ಹುಟ್ಟು ದೇವರ ಹಿಪ್ಪರಗಿಯಲ್ಲಾದರೂ ಅವರ ಕಾರ್ಯಕ್ಷೇತ್ರವು ಕಲ್ಯಾಣವಾಗಿತ್ತು. ಶರಣರ ಬಟ್ಟೆಗಳನ್ನು ಮಡಿ ಮಾಡುವ, ಅಂದರೆ ಶರಣರ ಬಟ್ಟೆಗಳನ್ನು ಒಗೆದು, ಹಸನುಗೊಳಿಸಿ ಶುಭ್ರ ಮಾಡಿ ಅವುಗಳನ್ನು ಅವರವರ ಮನೆಗಳಿಗೆ ತಲುಪಿಸುವ ಪಾವನ ಕಾಯಕವನ್ನು ಮಾಚಿದೇವರು ಕೈಗೊಂಡಿದ್ದರು.ಇವರ ವಚನಗಳಲ್ಲಿ ಕಲಿದೇವರ ದೇವಾ ಎಂಬ ಅಂಕಿತವನ್ನು ಕಾಣುತ್ತೇವೆ. ವಚನಗಳಲ್ಲಿ ನಿಷ್ಠುರತೆ, ಗಣಾಚಾರ, ಕಲಿತನ, ಸಾಮಾಜಿಕ ಕಳಕಳಿ, ವಿಡಂಬನೆ ಮತ್ತು ಟೀಕೆಗಳನ್ನು ಕಾಣುತ್ತೇವೆ ಎಂದರು.
ಮುಖ್ಯಗುರುಮಾತೆ ಅನಿತಾ ಶರ್ಮಾ, ಶಿಕ್ಷಕರಾದ ಬಾಬಾಸಾಹೇಬ ಸಾಳುಂಕೆ,ವಸAತ ಪಾಟೀಲ, ಜಗದೇವಿ ಅಗಸ್ತö್ಯತೀರ್ಥ, ಶಿರೋಮಣಿ ದಯಾಲ, ನೈನಾ ಚಪ್ಪಳಗಾಂವಕರ್,ಸುನೀತಾ, ಕಲಾವತಿ ಸೇರಿದಂತೆ ಅನೇಕ ಜನರು ಹಾಜರಿದ್ದರು.