ಕಲಬುರಗಿ: ಕನ್ನಡ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ, ಪುಸ್ತಕಗಳನ್ನು ಖರೀದಿಸುವ ಕಡೆಗೆ ಗಮನ ಹರಿಸಬೇಕು. ಆ ಮೂಲಕ ಕನ್ನಡ ಮತು ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ ಎಂದು ಶರಣ ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಕೋವಿಡ್ ನಿಯಮಗಳ ಪ್ರಕಾರ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ನಗರದ ಸಾಹಿತ್ಯ ಪ್ರೇಮಿಗಳಿಗೆ ಮೌಲಿಕ ಕೃತಿಗಳನ್ನು ವಿತರಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತವಾಗಿದೆ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಚತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತಿನ ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವೆಲ್ಲರೂ ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಗಳ ಸಮ್ಮಿಲನದಲ್ಲಿ ಸಾಹಿತ್ಯಾಸಕ್ತರನ್ನು ಪ್ರೇರೆಪಿಸುವುದರೊಂದಿಗೆ ನಾಡಿನ ಭಾಷೆ ಸೇರಿದಂತೆ ಈ ಭಾಗದ ನೆಲ, ಜಲ ಸಮಸ್ಯೆಗಳ ಧ್ವನಿಯಾಗಬೇಕು ಎಂದರು.
ಶೈಕ್ಷಣಿಕ ಚಿಂತಕ ಸಂತೋಷ ಜವಳಿ, ಸಾಹಿತ್ಯ ಪ್ರೇರಕರಾದ ಶರಣ ರೆಡ್ಡಿ, ಶ್ರೀಕಾಂತ ಆಲೂರ, ಯಶ್ವಂತ ಗಚ್ಚಿನಮನಿ, ಶರಣರಾಜ್ ಛಪ್ಪರಬಂದಿ, ಸಿದ್ಧರಾಮ ಹಮಚನಾಳ, ಶಿವಾನಂದ ಮಠಪತಿ, ಶಿವರಾಜ ಅಂಡಗಿ, ನಾಗೇಂದ್ರಪ್ಪ ಮಾಡ್ಯಾಳೆ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಪ್ರಭುಲಿಂಗ ಮೂಲಗೆ, ವಿದ್ಯಾಸಾಗರ ದೇಶಮುಖ, ಬಿ.ಎಂ.ಪಾಟೀಲ ಕಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.