ಬೀದರ್: ಕಾವ್ಯ ರಚನೆಗಿಂತ ಗದ್ಯ ಬರವಣಿಗೆ ಕಷ್ಟಕರವಾಗಿದ್ದು, ಕಾವ್ಯದಲ್ಲಿ ಕಲ್ಪನೆಯಿದ್ದರೆ ಗದ್ಯದಲ್ಲಿ ವಾಸ್ತವಕತೆಯಿರುತ್ತದೆ ಕಥೆಗೆ ಪರಕಾಯ ಪ್ರವೇಶ ಅಗತ್ಯ ಎಂದು ಖ್ಯಾತ ಕಥೆಗಾರ ಶಿವಕುಮಾರ್ ನಾಗವಾರ್ ಅವರು ಇಲ್ಲಿ ಹೇಳಿದರು.
ಹಿರಿಯ ಸಾಹಿತಿ ಖ್ಯಾತ ಕಥೆಗಾರ ಶಿವಕುಮಾರ್ ನಾಗವಾರ್ ಅವರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ಅವರು, ವಿದ್ಯಾರ್ಥಿ ದೆಸೆಯಿಂದಲೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ನನಗೆ ಪ್ರಾಥಮಿಕ ಶಾಲೆ ಶಿಕ್ಷಕರು, ನನ್ನ ತಂದೆಯೆ ನನ್ನ ಸಾಹಿತ್ಯ ರಚನೆಗೆ ಪ್ರೇರಣೆಯಾದರೆ ಸಿದ್ದಲಿಂಗಯ್ಯನವರ ಕಾವ್ಯ ಪ್ರಭಾವ ಬೀರಿತು. ನಮಮ್ಮೂರ ಸುತ್ತಲಿನ ಪರಿಸರ, ಅಲ್ಲಿನ ವರ್ಗ ತಾರತಮ್ಯ ಕೇಂದ್ರಿತ ಘಟನೆಳು ಮೊದಲ ಕಥಾವಸ್ತು. ಬಹುಸಂಸ್ಕೃತಿ ಉಳಿವಿಗಾಗಿಯೇ ದೇಸಿಭಾಷೆ ಬಳಕೆ ಮಾಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಮನೋಹರ್ ಅವರು ಮಾತನಾಡಿ, ಸಾಹಿತಿಗಳ ಬದುಕು ಬರಹ ಅವಲೋಕನ ಮಾಡುವ ಈ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸತಸವುಂಟು ಮಾಡಿದ್ದು ಈ ಕಾರ್ಯಕ್ರಮ ಕೇವಲ ಸಾಹಿತಿಗಳಿಗೆ ಮೀಸಲಾಗಿಡದೆ ಸಾಂಸ್ಕೃತಿಕ ಸಾಧಕರ ಮನೆಯಲ್ಲಿಯೂ ಆಯೋಜಿಸಬೇಕಾಗಿದೆ. ಭವಿಷ್ಯದಲ್ಲಿ ಸ್ಥಳೀಯ ಉದಯೋನ್ಮುಖ ಬರಹಗಾರರಿಗೆ ಕಥಾ ಕಮ್ಮಟ ಏರ್ಪಡಿಸಲಾಗುವುದು ಎಂದರು.
ಕಲಾವಿದ ಶಂಭುಲಿಂಗ್ ವಾಲದೊಡ್ಡಿ, ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ಚಂದ್ರಪ್ಪ ಹೆಬ್ಬಾಳಕರ್, ರಮೇಶ್ ಬಿರಾದಾರ್, ಶಿವಕುಮಾರ್ ಕಟ್ಟೆ, ಓಂಪ್ರಕಾಶ್ ದಡ್ಡೆ. ಸುಬ್ಬಣ್ಣ ಕರಕನಳ್ಳಿ, ರುಕೊದ್ದಿನ್ ಇಸ್ಲಾಪುರ್, ಶ್ಯಾಮ್ ನೆಲವಾಡೆ, ರಜಿಯಾ ಬಳಬಟ್ಟಿ, ಕಸ್ತೂರಿ ಪಟಪಳ್ಳಿ, ವಿದ್ಯಾವತಿ ಬಲ್ಲೂರ್, ಜಯದೇವಿ ಎದಲಾಪುರೆ, ಸುನಿತಾ ಬಿರಾದಾರ್, ಮೀರಾ ಖೇಣ್ ಮೊದಲಾದವರು ಭಾಗವಹಿಸಿದ್ದರು. ಟಿ.ಎಂ. ಮಚ್ಚೆ ಅವರು ಸ್ವಾಗತಿಸಿದರು. ಕಲ್ಯಾಣರಾವ್ ಚಳಕಾಪುರೆ ಅವರು ಕಾರ್ಯಕ್ರಮ ನಿರೂಪಿಸಿದರು. ವೀರಶೆಟ್ಟಿ ಚನಶೆಟ್ಟಿ ಅವರು ವಂದಿಸಿದರು.