ಸುರಪುರ: ತಾಲೂಕಿನ ಸೂಗುರು ಗ್ರಾಮದ ಪ್ರಗತಿಪರ ರೈತ ಹಾಗು ರೈತ ಹೋರಾಟಗಾರ ಬಸನಗೌಡ ಕಮತಗಿ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಕೆಮ್ಮು ಜ್ವರ ಕಾಣಿಸಿಕೊಂಡು ಹಿನ್ನೆಲೆಯಲ್ಲಿ ದೇವದುರ್ಗದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.ನಂತರ ಅವರಿಗೆ ಕೊರೊನಾ ಸೊಂಕು ಇರವುದು ದೃಢಪಟ್ಟಿತ್ತು,ದೇವದುರ್ಗ ಆಸ್ಪತ್ರೆಯ ವೈದ್ಯರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು.ಅದರಂತೆ ನಾಲ್ಕು ದಿನಗಳ ಹಿಂದೆ ರಿಮ್ಸ್ ಆಸ್ಪತ್ರೆಗೆ ಹೋಗಿದ್ದು,ನಂತರ ಅಲ್ಲಿಂದ ರಾಯಚೂರಿನ ಓಪೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಪ್ರಗತಿಪರ ರೈತ ಬಸನಗೌಡ ಕಮತಗಿ ಕೊರೊನಕ್ಕೆ ಬಲಿ
ಆದರೆ ಬಸನಗೌಡ ಸಾವಿನ ಮುನ್ನ ರಾಯಚೂರಿನ ಆಸ್ಪತ್ರೆಯಲ್ಲಿರುವಾಗಲೇ ವೀಡಿಯೊ ಒಂದನ್ನು ಮಾಡಿದ್ದು,ಅದರಲ್ಲಿ ತನಗೆ ಕೊರೊನಾ ಸೊಂಕು ಇರುವುದು ದೃಢಪಟ್ಟನಂತರ ರಿಮ್ಸ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು,ಆದರೆ ಇಲ್ಲಿ ಆಸ್ಪತ್ರೆಗೆ ಬಂದಿದ್ದೇನೆ ಇಲ್ಲಿ ಕೇವಲ ನನಗೆ ಆಕ್ಸಿಜನ್ ಹಚ್ಚಿರುವುದನ್ನು ಬಿಟ್ಟರೆ ಇದುವರೆಗೂ ಯಾವುದೇ ವೈದ್ಯರು ಬಂದು ಏನೊಂದು ಕೇಳುತ್ತಿಲ್ಲ,ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ನನ್ನ ಆರೋಗ್ಯದ ಸ್ಥಿತಿ ಗಂಭೀರವಾಗುತ್ತದೆ ಎಂದು ತನ್ನ ಅಳಲು ತೋಡಿಕೊಂಡಿರುವ ವೀಡಿಯೋ ಈಗ ಎಲ್ಲೆಡೆ ವೈರಲಾಗಿದ್ದು ಆಸ್ಪತ್ರೆಗಳಲ್ಲಿನ ನಿರ್ಲಕ್ಷ್ಯದ ಕರಾಳ ಮುಖವನ್ನು ಅನಾವರಣಗೊಳಿಸಿದಂತಿದೆ.
ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರೈತ ಬಸನಗೌಡ ಕಮತಗಿ ನಿಧನಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಅನೇಕ ಮುಖಂಡರು ಹಾಗು ರೈತ ಸಂಘಟಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.