ಕಲಬುರಗಿ: ಕಳೆದ ಒಂದುವರೆ ವರ್ಷದಿಂದ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಅನೇಕ ಜನರ ಸಾವಿಗೆ ಕಾರಣವಾಗಿದೆ. ಮುಂದೆ ಮಕ್ಕಳಿಗೆ ಕಂಟಕವಾಗಲಿರುವ ಕೊರೊನಾ 3ನೇ ಅಲೆ ತಡೆಗಟ್ಟಲು ಸರಕಾರ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಮೊದ ಮೊದಲು ವೃದ್ಧರಿಗೆ ಕಂಟಕವಾಗಿದ್ದ ಕೊರೊನಾ 2 ನೇ ಅಲೆಗೆ ಹದಿಹರೆಯದವರು ತುತ್ತಾಗುತ್ತಿದ್ದಾರೆ.ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಅನೇಕರು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ಪಾಸಿಟಿವ್ ಬಂದವರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೆಲ್ಲ ಸರಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳದಿರುವುದೆ ಕಾರಣವಾಗಿದೆ. ಕೊರೊನಾ 2ನೇ ಅಲೆ ಕುರಿತು ತಜ್ಞರು ಕಳೆದ ಡಿಸೇಂಬರ್ ನಲ್ಲಿ ಮುನ್ನೇಚ್ಚರಿಕೆ ನೀಡಿದ್ದರು ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರಿಂದ ವ್ಯಾಪಕವಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ಹರಡಿತು.ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾರ್ವಜನಿಕರು ಈಗಲೂ ಪರದಾಡುತ್ತಿದ್ದಾರೆ. ಸರಕಾರ ತನ್ನ ಸಮಯೋಚಿತ ಪ್ರಜ್ಞೆ ಕಳೆದುಕೊಂಡಿದ್ದು ಮುಂಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ.
ಸರಕಾರ ಇದೇ ರೀತಿ ವರ್ತಿಸಿದರೆ ಕೊರೊನಾ 3 ನೆ ಅಲೆಗೆ ಮಕ್ಕಳು ಅಪಾರ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ. ಇದನ್ನು ತಡೆಗಟ್ಟಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.ಜೋತೆಗೆ 3ನೇ ಅಲೆ ಬಂದರೂ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು. ಆಕ್ಸಿಜನ್, ಔಷಧಿಗಳು ಸೇರಿದಂತೆ ಚಿಕಿತ್ಸೆಗೆ ಬೇಕಾಗುವ ಸಾಮಾಗ್ರಿಗಳು ಮುಂಚಿತವಾಗಿ ತಯ್ಯಾರಿ ಮಾಡಿಕೊಳ್ಳಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.