ಮಳವಳ್ಳಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ಪಕ್ಷದ ಪ್ರಚಾರ ವೇದಿಕೆಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಉಮೇಶ್ ದಡಮಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಾಳೆ ಜೂ 28 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಕ್ಕಾಗಿ ತಾಲ್ಲೂಕಿನಾದ್ಯಂತ ಅಳವಡಿಸಿರುವ ಪ್ಲೆಕ್ಸ್ ಗಳಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರವನ್ನು ಹಾಕದೆ ಸಂಸತ್ ಸದಸ್ಯರನ್ನು ಅವಮಾನಿಸಲಾಗಿದೆ. ಶಾಸಕರಾದ ಅನ್ನದಾನಿ, ಮರಿತಿಬ್ಬೇಗೌಡ, ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರ ಜೊತೆ ಲೋಕಸಭೆ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವಚಿತ್ರಗಳು ರಾರಾಜಿಸುತ್ತಿವೆ. ಇದಕ್ಕೆ ನಮ್ಮ ಪ್ರತಿರೋದ ಇಲ್ಲ.
ಆದರೆ ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರ ಹಾಕದಿರಲು ಕಾರಣ ವಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹೋಬಳಿ ಘಟಕಗಳ ಅಧ್ಯಕ್ಷರ ಫೋಟೋಗಳನ್ನು ಹಾಕಿರುವುದಿಲ್ಲ. ಅಲ್ಲದೆ ಅಜೀವ ಸದಸ್ಯರಿಗೆ ಕನಿಷ್ಟ ಆಹ್ವಾನ ಪತ್ರವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಿಲ್ಲ. ನವೆಂಬರ್ ನಲ್ಲಿ ಬರುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೋಸ್ಕರ ಕಾರ್ಯಕ್ರಮವನ್ನು ಆಯೋಜಿಸಿದಂತೆ ಕಂಡುಬರುತ್ತಿದೆ ಎಂದು ದೂರಿದರು.
ಕನ್ನಡ ನಾಡು, ನುಡಿ, ಸಾಹಿತ್ಯ ಅಭಿವೃದ್ಧಿಗಾಗಿ ಸಮ್ಮೇಳನ ಆಯೋಜಿಸಬೇಕೆ ಹೊರತು ರಾಜಕೀಯಕ್ಕೋಸ್ಕರ ಸಾಹಿತ್ಯ ಸಮ್ಮೇಳನ ಆಯೋಜಿಸಬಾರದು ಎಂದು ಹೇಳಿದರು. ಒಂದು ವೇಳೆ ಇದೇ ರೀತಿ ನಡೆದರೆ ನಾವು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು