ಶಹಾಬಾದ:ದಿಲ್ಲಿಯಲ್ಲಿ ಕೃಷಿ ಮಸೂದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹೋರಾಟ ಪ್ರಾರಂಭವಾಗಿ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮೇ ೨೬ ರಂದು ಕರಾಳ ದಿನಾಚರಣೆ ಭಾಗವಾಗಿ ಬುಧವಾರ ಕಲಬುರಗಿ ಕಿಸಾನ ಮೋರ್ಚಾ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಸರಕಾರದ ರೈತ ವಿರೋಧಿ ಕಾಯ್ದೆಗಳು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ ಮಾತನಾಡಿ, ಕಳೆದ ಆರು ತಿಂಗಳಿನಿಂದ ದಿಲ್ಲಿಯಲ್ಲಿ ನಿರಂತರವಾಗಿ ಪ್ರಧಾನಿ ಮೋದಿ ಮೇಲೆ ಆಸೆ ಭಾವನೆ ಇಟ್ಟುಕೊಂಡಿದ್ದೆವು.ಆದರೆ ರೈತ ವಿರೋಧಿ ಕಾಯ್ದೆ ತಂದು ರೈತರಿಗೆ ದಕ್ಕೆ, ಆತಂಕ ತರುವ ಕೆಲಸ ಮಾಡಿದ್ದಾರೆ.ರೈತರ ಹೋರಾಟದಲ್ಲಿ ಹಲವಾರು ಜನರು ಜೀವ ಕಳೆದುಕೊಂಡರು ಸರಕಾರ ಮಾತ್ರ ಕಣ್ಣು ತೆರೆದು ನೋಡಿಲ್ಲ.ಸರಕಾರಕ್ಕೆ ಕರುಣೆ, ಮಾನ, ಮರ್ಯಾದೆ ಇದ್ದರೆ ರೈತರ ಪರವಾಗಿ ನಿಲ್ಲಬೇಕಾಗಿತ್ತು.ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆ ಕೆಲಸವನ್ನು ಮಾಡಿಲ್ಲ.ಆದ್ದರಿಂದ ರೈತ ವಿರೋಧಿ ಬಿಜೆಪಿ ಸರಕಾರಕ್ಕೆ ಇಂದು ಕಪ್ಪ ಬಟ್ಟೆ ಪ್ರದರ್ಶಿಸಿದ್ದು, ಮುಂದೆ ಒಂದು ದಿನ ರೈತರು ಬುದ್ಧಿ ಕಲಿಸುತ್ತಾರೆ.ಕಾರಣ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ವಿಶ್ವರಾಜ ಫೀರೋಜಾಬಾದ ಹಾಗೂ ಶರಣು ಬನ್ನೇರ್ ಮಾತನಾಡಿ, ರೈತರಿಗೆ ಬೇಡವಾದ ಮಸೂದೆಗಳನ್ನು ಜಾರಿಗೆ ತಂದು ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ.ರೈತರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.ದೇಶಾದ್ಯಂತ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.ಇನ್ನಾದರೂ ಸರಕಾರ ಗಮನಹರಿಸಿ ಸಮಸ್ಯೆಗಳನ್ನು ವಿಚಾರ ಮಾಡಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರು ಹಾಗೂ ಇತರರು ಇದ್ದರು.