ವಾಡಿ:ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅತಿಥಿ ಶಿಕ್ಷಕರ ಹೋರಾಟ ಸಮಿತಿ ನೇತೃತ್ವದಲ್ಲಿ ರವಿವಾರ ವಾಡಿ ಪಟ್ಟಣದಲ್ಲಿ ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರು ಆನ್ಲೈನ್ ಆಂದೋಲನ ನಡೆಸಿದರು. ಕೊರೊನಾ ರೋಗದ ಲಾಕ್ಡೌನ್ ಸಂಕಷ್ಟದಲ್ಲಿರುವ ಅತಿಥಿ ಶಿಕ್ಷಕರನ್ನು ಸರಕಾರ ಸಂಪೂರ್ಣ ಮರೆತಿದೆ. ಕೋವಿಡ್ ಪರಿಹಾರ ಘೋಷಣೆಯಲ್ಲಿ ನಮನ್ನು ಕೈಬಿಡುವ ಮೂಲಕ ಸರಕಾರವೇ ನಮ್ಮ ತಿಥಿ ನೆರವೇರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಮುಖಂಡ ಯೇಸಪ್ಪಾ ಕೇದಾರ, ಅತಿಥಿ ಶಿಕ್ಷಕರ 14 ತಿಂಗಳ ವೇತನ ಬಿಡುಗಡೆ ಮಾಡಬೇಕು. ಕೋವಿಡ್ ಪ್ಯಾಕೇಜ್ ಘೋಷಿಸಬೇಕು. ಪಿಎಫ್ ಮತ್ತು ಇಎಸ್ ಐ ಸೌಲಭ್ಯ ಒದಗಿಸಬೇಕು. ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ನಿರ್ಲಕ್ಷ್ಯ ವಹಿಸಿದರೆ ಉನ್ನತ ಹಂತದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅತಿಥಿ ಶಿಕ್ಷಕರಾದ ಸೀತಾಬಾಯಿ ಎಂ. ಹೇರೂರ, ಶ್ರೀದೇವಿ ಎಸ್.ಮಲಕಂಡಿ, ಶಿವಾನಂದ ಪೂಜಾರಿ, ಸೋಮಶೇಖರ ಗೌಡ, ಕವಿತಾ ಸುನೀಲ ರಾಠೋಡ, ನಾಗರತ್ನ ಪ್ರಕಾಶ ಹಡಪದ, ನೀಲಮ್ಮಾ ದುರ್ಗದ್, ಶೋಭಾ ಮ್ಯಾಗೇರಿ, ಅಣ್ಣೆಮ್ಮಾ ಕುಂಬಾರ ಸೇರಿದಂತೆ ಅನೇಕ ಶಿಕ್ಷಕರು ಆನ್ಲೈನ್ ಆಂದೋಲನದಲ್ಲಿ ಪಾಲ್ಗೊಂಡಿದ್ದರು.