ಶಹಾಬಾದ:ಹರಿದು ಚಿಂದಿಯಾಗಿರುವ ರಸ್ತೆ, ಎಲ್ಲಿ ನೋಡಿದರಲ್ಲಿ ತಗ್ಗು ಗುಂಡಿಗಳು, ಇಲ್ಲಿನ ಸಂಚರಿಸುವ ಜನರಿಗೆ ಎಲ್ಲಿಲ್ಲದ ಸಂಕಟ.ಇದು ಹೊನಗುಂಟಾ ಗ್ರಾಮಕ್ಕೆ ಹೋಗುವ ಮಧ್ಯದ ವಡ್ಡರವಾಡಿಯ ಸಮೀಪದ ರಸ್ತೆಯ ದುಸ್ಥಿತಿಯ ನೋಟವಾಗಿದೆ.
ಇಲ್ಲಿನ ರಸ್ತೆಯಿಂದ ಹೊರಡುವ ಜನರಿಗೆ ಹದಗೆಟ್ಟ ರಸ್ತೆಗಳ ದರ್ಶನ ಆಗದೇ ಇರಲಾರದು.ಹದಗೆಟ್ಟ ಇಲ್ಲಿನ ರಸ್ತೆಗಳು ವರ್ಷದ ಎಲ್ಲಾ ದಿನಗಳಲ್ಲಿ ಇದೇ ಸ್ಥಿತಿಯಲ್ಲಿರುತ್ತವೆ. ಮಳೆಗಾಲ ಬಂದರೆ ಕೆಸರು ಮತ್ತು ಬೇಸಿಗೆ ಹಾಗೂ ಚಳಿಗಾಲದಲ್ಲಿ ಧೂಳು ಉಂಟು ಮಾಡುವ ಸೀಸನ್ ರಸ್ತೆಗಳಾಗಿ ಮಾರ್ಪಾಡುಗೊಳ್ಳುತ್ತವೆ. ಈ ರಸ್ತೆಯ ದುರಸ್ತಿ ಯಾವಾಗ? ಎಂಬುದೆ ನರಕಯಾತನೇ ಅನುಭವಿಸುತ್ತಿರುವ ಪ್ರಯಾಣಿಕರ ಯಕ್ಷ ಪ್ರಶ್ನೆಯಾಗಿದೆ.
ಜನಸ್ನೇಹಿಯಾಗಿರಬೇಕಾದ ರಸ್ತೆಗಳು ಮಾತ್ರ ಹದಗೆಟ್ಟಿವೆ. ರಸ್ತೆಗಳಿಗಾಗಿ ಸರ್ಕಾರ ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುವ ಹಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಅದರೊಳಗೆ ಪ್ರಯಾಣಿಸುವ ಪ್ರಯಾಣಿಕರು ಜಟಕಾ ಬಂಡಿಯೊಳಗೆ ಕುಂತ ಅನುಭವ ಆಗದೇ ಇರಲಾರದು.ಮಳೆ ಬಂದಾಗ ರಸ್ತೆ ತುಂಬ ಕೆಸರು ಉಂಟಾಗಿ ಬೈಕ್ ಸವಾರರು ನೆಲಕ್ಕೆ ಬಿದ್ದ ಉದಾಹರಣೆಗಳಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿನ ಜನರು ಪ್ರಯಾಣ ಬಯಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರೆ ಇಲ್ಲಿನ ರಸ್ತೆಗಳಲ್ಲಿ ತೆಗ್ಗು ಗುಂಡಿಗಳನ್ನು ಎಣಿಸಲು ಸಾಧ್ಯವಿಲ್ಲಷ್ಟರ ಮಟ್ಟಿಗೆ ಹಾಳಾಗಿದೆ.
ಸುಮಾರು ೨೫ ರಿಂದ ೪೦ ಟನ್ ಭಾರ ಹೊತ್ತ ಸಿಮೆಂಟ ಹಾಗೂ ಫರ್ಸಿ ಲಾರಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಅಲ್ಲದೆ ಒಬ್ಬರಿಗೊಬ್ಬರೂ ಗುರುತು ಸಿಗದ ಹಾಗೇ ಮುಖ, ಮೈಗೆ ಭಾರಿ ಪ್ರಮಾಣದ ಧೂಳು ಹತ್ತುವುದರಿಂದ ಜನರು ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಕಳಪೆ ಡಾಂಬರೀಕರಣದಿಂದ ರಸ್ತೆ ಕಿತ್ತು ಹೋಗಿ ದೊಡ್ಡ ದೊಡ್ಡ ತಗ್ಗು ದಿನ್ನೆಗಳು ನಿರ್ಮಾಣವಾಗಿದೆ. ಇದರಿಂದ ಜನರು ರಸ್ತೆಗಿಳಿಯಲು ತೊಂದರೆ ಪಡಬೇಕಾಗಿದೆ. ವಾಹನ ಸವಾರರು ಈ ಹದಗೆಟ್ಟ ರಸ್ತೆಯ ಸುಧಾರಣೆಗೆ ಮುಂದಾಗದ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸದ್ಯ ಈ ರಸ್ತೆಯಿಂದ ಹೋಗಬೇಕಾದರೆ ಉಯ್ಯಾಲೆ ಆಡಿದಂತಾಗುತ್ತದೆ. ಸುಲಭ ಹೆರಿಗೆಗೆ ಇಲ್ಲಿಗೆ ಬರಬೇಕಷ್ಟೆ ಎಂದು ಇಲ್ಲಿನ ಜನರು ಈ ರಸ್ತೆಯ ಕುರಿತು ವ್ಯಂಗವಾಗಿ ಮಾತನಾಡುತ್ತಾರೆ. ಆದಷ್ಟು ತಾತ್ಕಾಲಿವಾದರೂ ರಸ್ತೆ ದುರಸ್ತಿ ಮಾಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಿಲ್ಲ.ಜನರ ಗೋಳು ಕೇಳುತ್ತಿಲ್ಲ. ಈ ರಸ್ತೆಗಳ ಶಾಶ್ವತ ಸುಧಾರಣೆಗೆ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರ ನರಕಯಾತನೆ ತಪ್ಪಿಸಬೇಕಾಗಿದೆ.- ವಿಶ್ವರಾಜ ಫೀರೋಜಬಾದ ಅಧ್ಯಕ್ಷರು ಕರವೇ ಹೊನಗುಂಟಾ.
ಇಲ್ಲಿನ ರಸ್ತೆ ಹದಗೆಟ್ಟು ಹೋಗಿರುವುದರಿಂದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದೆ.ಈ ಬಗ್ಗೆ ಯಾವ ಇಲಾಖೆಯೂ ಕ್ರಮಕೈಗೊಳ್ಳುತ್ತಿಲ್ಲ.ಇದೇ ರಸ್ತೆಯಿಂದ ಅಧಿಕಾರಿಗಳು ಬರುತ್ತಾರೆ.ಆದರೆ ಗಮನಹರಿಸದಿರುವುದು ಮಾತ್ರ ದುರಂತ.- ಸಿದ್ದು ವಾರಕರ್ ಹೊನಗುಂಟಾ ಗ್ರಾಮಸ್ಥ.