ಶಹಾಬಾದ: ನಗರಸಭೆಯ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆ(೨೪*೭)ಯಡಿ ಬಳಕೆ ಮಾಡುತ್ತಿರುವ ಬಳಕೆದಾರರು ನೀರಿನ ಕರವನ್ನು ೭ ದಿನಗಳ ಒಳಗಾಗಿ ಸಾರ್ವಜನಿಕರು ನಗರಸಭೆಯ ಕಾರ್ಯಾಲಯದಲ್ಲಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ತಿಳಿಸಿದರು.
ಅವರು ಬುಧವಾರ ನಗರಸಭೆಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈಗಾಗಲೇ ನಿರಂತರ ನೀರು ಸರಬರಾಜು ಯೋಜನೆ(೨೪*೭)ಯಡಿ ವಾಸ/ವಾಣೀಜ್ಯ ಉದ್ದೇಶಕ್ಕಾಗಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಸಂಪರ್ಕ ಪಡೆದ ಬಳಕೆದಾರರು ನೀರಿನ ಕರವನ್ನು ಬಾಕಿ ಮೊತ್ತ ಸಹಿತ ಚಾಲ್ತಿ (೨೦೨೧-೨೨) ನೇ ಸಾಲಿನವರೆಗಿನ ಕರವನ್ನು ನೀಡತಕ್ಕದ್ದು. ತಪ್ಪಿದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
ಒಮ್ಮೆ ಕಡಿತಗೊಳಿಸಿದ ಸಂಪರ್ಕವನ್ನು ಮರು ಜೋಡಣೆ ಮಾಡಬೇಕಾದರೆ ಅದಕ್ಕೆ ತಗುಲುವ ನೀರಿನ ಸಂಪರ್ಕ ಕಡಿತದ ವೆಚ್ಚ ಹಾಗೂ ಮರುಜೋಡಣಾ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ.ಅಲ್ಲದೇ ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ಪ್ರಕಾರ ನೀರಿನ ಶುಲ್ಕ ವಸೂಲಾತಿಗೆ ಕ್ರಮ ಜರುಗಿಸಲಾಗುವುದು.ಸಾರ್ವಜನಿಕರು ಬಾಕಿ ಮೊತ್ತ ಸಹಿತ ಚಾಲ್ತಿ ನೀರಿನ ಕರವನ್ನು ನಿಗಧಿತ ಅವಧಿಯೊಳಗೆ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.