ವಿಜಯಭಾಸ್ಕರ ವರದಿಯಂತೆ ಪ್ರಾದೆಶಿಕ ಕಚೇರಿ ಸ್ಥಾಳಾಂತರ ತಡೆಗೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲರಿಗೆ ಒತ್ತಾಯ

0
44

ಕಲಬುರಗಿ : ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ ಇಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲರನ್ನು ಭೇಟಿಯಾಗಿ ವಿಜಯಭಾಸ್ಕರ ವರದಿಯ ಶಿಫಾರಸ್ಸಿನಂತೆ ಯಾವುದೇ ಕಾರಣಕ್ಕೂ ಪ್ರಾದೇಶಿಕ ಕಚೆರಿ ರದ್ದು ಮಾಡದಂತೆ ಮುಖ್ಯಮಂತ್ರಿಗಳ ಮೇಲೆ ಮತ್ತು ಕಂದಾಯ ಸಚಿವರ ಮೇಲೆ ಸಕಾರಾತ್ಮಕ ಒತ್ತಡ ತಂದು ನಮ್ಮ ಪ್ರದೇಶಕ್ಕೆ ನ್ಯಾಯ ಒದಗಿಸಬೇಕೆಂದು ನಿಯೋಗ ಒತ್ತಾಯಿಸಿತು.

ರಾಜ್ಯ ಸರಕಾರ ಆಡಳಿತ ಸುಧಾರಣೆಯ ದೃಷ್ಟಿಯಿಂದ ಮತ್ತು ಜನರಿಗೆ ಸರಳವಾಗಿ ಆಡಳಿತ ಯಂತ್ರ ತಲುಪಲು, ಸರಕಾರದ ಯೋಜನೆಗಳು ಸರಳವಾಗಿ ಜನಸ್ನೇಹಿಯಾಗಲು ವಿಜಯಭಾಸ್ಕರ ಅವರ ನೇತೃತ್ವದಲ್ಲಿ ಆಡಳಿತ ಸುಧಾರಣೆ ಸಮಿತಿ ರಚಿಸಿದ್ದು, ಸದರಿ ಸಮಿತಿಯ ವರದಿಯಂತೆ ಸ್ವಾಗತಾರ್ಹ ವಿಷಯಗಳಾದ ೮೦೦ಕ್ಕೂ ಹೆಚ್ಚು ಸೇವಾ ಸಿಂಧು ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸೇರಿದಂತೆ, ನಗರಗಳಲ್ಲಿ ಕರ್ನಾಟಕ ಒನ್ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪುಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಿಸುವ ಸದರಿ ಯೋಜನೆಗಳು ಆಡಳಿತ ಸುಧಾರಣೆಯ ದೃಷ್ಟಿಯಿಂದ ಉತ್ತಮವಾಗಿವೆ.

Contact Your\'s Advertisement; 9902492681

ಇದಕ್ಕೆ ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಮಾಡಬೇಕೆಂಬ ಶಿಫಾರಸ್ಸು ಅಘಾತಕಾರಿ ವಿಷಯ ಮತ್ತು ಅಪಾಯಕಾರಿ ಯಾಗಿದೆ. ಇದರಿಂದ ಭೌಗೋಳಿಕವಾಗಿ ದೂರ ಇರುವ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಆಡಳಿತಾತ್ಮಕ ದೃಷ್ಟಿಯಿಂದ, ಅಭಿವೃದ್ಧಿಯ ದೃಷ್ಟಿಯಿಂದ ಮಾರಕವಾಗಿದೆ.

೩೭೧ನೇ(ಜೆ) ಕಲಂ ವಿಶೆಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಪ್ರಾದೇಶಿಕ ಆಯುಕ್ತರ ಕಚೆರಿ ಇರುವುದರಿಂದ ರಾಜಧಾನಿ ಬೆಂಗಳೂರಿನಿಂದ ಬಹುದೂರ ಇರುವ ನಮಗೆ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗಿದೆ. ಇದನ್ನು ರದ್ದುಮಾಡಿ, ಇಡೀ ರಾಜ್ಯಕ್ಕೆ ಒಂದೇ ಕಂದಾಯ ಆಯುಕ್ತಾಲಯ ಮಾಡಿ ಬೆಂಗಳೂರಿನಲ್ಲಿ ಇದರ ಕಚೇರಿ ಸ್ಥಾಪನೆ ಮಾಡಿದರೆ ಮತ್ತೇ ನಾವು ಬ್ರಿಟೀಷರ ಧೋರಣೆಯಂತೆ ಕೇಂದ್ರೀಕರಣ ವ್ಯವಸ್ಥೆಗೆ ಹೋಗಿದಂತಾಗುತ್ತದೆ. ಪ್ರಯುಕ್ತ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿರುವ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಅನುಕೂಲವಾಗುವ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಮಾಡದೇ ಇದಕ್ಕೆ ಇನ್ನೂ ಹೆಚ್ಚಿನ ಅಧಿಕಾರಗಳನ್ನು ನೀಡಿ ಉಳಿಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಬೆಂಗಳೂರು, ಮೈಸೂರು ವಿಭಾಗಗಳಲ್ಲಿ ಸದರಿ ಕಚೇರಿಗಳು ರದ್ದು ಮಾಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಭೌಗೋಳಿಕವಾಗಿ ಅತ್ಯಂತ ದೂರ ಇರುವ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಕಚೆರಿ ರದ್ದು ಮಾಡಿದರೆ, ನಮ್ಮ ಪ್ರದೇಶದ ಜನರಿಗೆ ಬಹಳ ತೊಂದರೆ ಆಗುವುದು. ಕಾರಣ ಈ ವಿಷಯಕ್ಕೆ ತಾವು ಗಂಭೀರವಾಗಿ ಪರಿಗಣಿಸಿ, ಯಾವುದೇ ಕಾರಣಕ್ಕೂ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಮಾಡದೇ ಮುಂದುವರೆಸಲು ಸಮಿತಿ ಆಗ್ರಹಿಸಿದೆ.

ಸಮಿತಿಯ ಮನವಿ ಪತ್ರವನ್ನು ಸ್ವೀಕರಿಸಿ ವಿವರವಾಗಿ ಚರ್ಚಿಸಿದ ಮಾನ್ಯ ಬಿ.ಜಿ. ಪಾಟೀಲರು ತಕ್ಷಣವೇ ಪ್ರಾದೇಶಿಕ ಆಯುಕ್ತರಿಗೆ ಸಂಪರ್ಕಿಸಿ ಈ ಬಗ್ಗೆ ವಿವರವನ್ನು ಪಡೆದುಕೊಂಡು ಕಂದಾಯ ಸಚಿವರಿಗೆ ಸಂಪರ್ಕಿಸಿದರು. ಅದರಂತೆ ಈ ಬಗ್ಗೆ ತಾವು ಮುಖ್ಯಮಂತ್ರಿಗಳಿಗೆ ಮತ್ತು ಕಂದಾಯ ಸಚಿವರಿಗೆ ಭೇಟಿಯಾಗಿ ಯಾವುದೇ ಕಾರಣಕ್ಕೂ ಪ್ರಾದೇಶಿಕ ಕಚೇರಿ ರದ್ದಾಗದಂತೆ ಎಲ್ಲರನ್ನೊಳ ಗೊಂಡು ಸಂಘಟಿತವಾಗಿ ಒತ್ತಡ ತಂದು ಕಚೇರಿ ಕಲಬುರಗಿಯಲ್ಲಿಯೇ ಉಳಿಸಿಕೊಂಡು ಈ ಭಾಗದ ಜನರಿಗೆ ಆಡಳಿತದ ದೃಷ್ಟಿಯಿಂದ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತೊಂದರೆಯಾಗದಂತೆ ಬದ್ಧತೆ ಪ್ರದರ್ಶಿಸುವ ಬಗ್ಗೆ ಭರವಸೆ ನೀಡಿದರು.

ನಿಯೋಗದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಡಾ. ಎ.ಎಸ್. ಭದ್ರಶೆಟ್ಟಿ, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪ ಬಂಡಕ್, ಮಹಮ್ಮದ ಮಿರಾಜೋದ್ದಿನ, ವೀರೇಶ ಪುರಾಣಿಕ, ಅಸ್ಲಂ ಚೌಂಗೆ, ಸಾಲೋಮನ ದಿವಾಕರ, ಮಹ್ಮಮದ ಸಿರಾಜೋದ್ದೀನ್, ಭೀಮರಾಯ, ಬಾಬಾ ಫಕ್ರೋದ್ದೀನ್, ಶಿವಾನಂದ ಕಾಂದೆ, ಎಚ್.ಎಂ. ಹಾಜಿ, ಬಾಬುರಾವ ಗಂವ್ಹಾರ್, ಸಿದ್ದು ಬಿರಾದಾರ, ಶಿವಕುಮಾರ ಬಿರಾದಾರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here