ಶಹಾಬಾದ:ತಾಲೂಕಿನ ವಿವಿಧ ಗ್ರಾಪಂಗಳ ವಿವಿಧ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಭರವಸೆ ನೀಡಿದ ಬಳಿಕ ಸೋಮವಾರ ತಾಪಂ ಎದುರುಗಡೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅರ್ನಿದಿಷ್ಟ ಧರಣಿ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೇವರ್ಗಿ ಕೆಪಿಆರ್ಎಸ್ ತಾಲೂಕಾಧ್ಯಕ್ಷ ಸುಭಾಷ ಹೊಸಮನಿ, ತಾಲೂಕಿನ ವಿವಿಧ ಗ್ರಾಪಂಗಳ ಸಿಬ್ಬಂದಿಗಳ ವೇತನ ನೀಡುತ್ತಿಲ್ಲ. ಸುಮಾರು ಒದೊಂದು ಗ್ರಾಪಂ ನೌಕರರ ೧೨ರಿಂದ ೧೫ ತಿಂಗಳಿನಿಂದ ವೇತನ ನೀಡದಿರುವುದರಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ತಿಂಗಳ ಸಂಬಳ ಸರಿಯಾಗಿ ಸಂಬಳ ತೆಗೆದುಕೊಂಡರೂ ಜೀವನ ನಡೆಸುವುದು ಕಷ್ಟ ಎನ್ನುವ ಕಾಲದಲ್ಲಿ ಸುಮಾರು ೧೨ ತಿಂಗಳ ಸಂಬಳವಿಲ್ಲದೇ ಕೆಲಸ ಮಾಡಿದ್ದಾರೆ.ಕೆಲಸ ಮಾಡಿದ ಸಿಬ್ಬಂದಿಗಳಿಗೆ ಕನಿಷ್ಠ ಪಕ್ಷ ಸಂಬಳ ನೀಡದ ಅಧಿಕಾರಿಗಳ ಬೇಜವಾಬ್ದಾರಿ ಎತ್ತಿ ತೋರುತ್ತದೆ ಎಂದರು.
ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಸಮಸ್ಯೆಗಳು ಉಂಟಾಗುತ್ತಿವೆ. ಕೈಯಲ್ಲಿ ಕಾಸಿಲ್ಲದೇ ನೌಕರರು ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ದುಡಿತಕ್ಕೆ ಸಂಬಳ ಇಲ್ಲ. ಸಾಲಕ್ಕೆ ಬಡ್ಡಿ ಕಟ್ಟಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ ಪೆಟ್ಟು ಬಿದ್ದಿದೆ.ಕೂಡಲೇ ಎಲ್ಲಾ ನೌಕರರ ಸಂಬಳ ನೀಡಬೇಕು.ಇಲ್ಲದಿದ್ದರೇ ಉಗ್ರವಾದ ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯತೆ ತರಬೇಡಿ ಎಂದು ಹೇಳಿದರು.
ಪ್ರತಿಭಟನಾಕಾರ ಜತೆ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ರಾವೂರ, ಮಾಲಗತ್ತಿ, ಭಂಕೂರ ಗ್ರಾಪಂ ನೌಕರರ ನಾಲ್ಕು ತಿಂಗಳ ವೇತನ ಈಗಾಗಲೇ ಪಾವತಿಸಲಾಗಿದೆ.ಇನ್ನುಳಿದ ಮರತೂರ, ತೊನಸನಹಳ್ಳಿ(ಎಸ್), ಮುಉಳನಾಗಾವ, ಹೊನಗುಂಟಾ ಗ್ರಾಪಂ ನೌಕರರ ನಾಲ್ಕು ತಿಂಗಳ ವೇತನ ಎರಡು ಮೂರು ದಿನಗಳಲ್ಲಿ ಪಾವತಿಸಲಾಗುವುದು.ಉಳಿದ ತಿಂಗಳ ವೇತನ ಹಂತ ಹಂತವಾಗಿ ಪಾವತಿಸಲಾಗುವುದು.ಇನ್ನುಳಿದ ಬೇಡಿಕೆಗಳನ್ನು ಪರಿಶೀಲಿಸಿ ಆದಷ್ಟು ಬೇಗನೆ ಈಡೇರಿಸುತ್ತೆನೆ ಎಂದು ಲಿಖಿತವಾಗಿ ಭರವಸೆ ನೀಡಿದ ಬಳಿದ ಧರಣಿ ಕೈಬಿಡಲಾಯಿತು.
ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕಾ ಉಪಾಧ್ಯಕ್ಷ ಸಿದ್ರಾಮಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಖಜಾಂಚಿ ಚಿತ್ರಶೇಖರ ದೇವರಮನಿ, ಸಿಐಟಿಯು ತಾಲೂಕಾಧ್ಯಕ್ಷ ಶೇಖಮ್ಮ ಕುರಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ವಿಶ್ವರಾಜ ಫಿರೋಜಬಾದ ಸೇರಿದಂತೆ ಗ್ರಾಪಂ ಸಿಬ್ಬಂದಿಗಳ ಹಾಜರಿದ್ದರು.