ಸುರಪುರ: ತಾಲೂಕು ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿದ್ದ ಸಾಹಿತಿ ಹಾಗು ನಿವೃತ್ತ ಶಿಕ್ಷಕರಾದ ಬೀರಣ್ಣ ಬಿ.ಕೆ.ಆಲ್ದಾಳರ ನಿಧನಕ್ಕೆ ತಾಲೂಕಿನ ಹೆಗ್ಗಣದೊಡ್ಡಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಬೀರಣ್ಣ ಬಿ.ಕೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶಾಲೆಯ ಪ್ರಧಾನ ಗುರು ರತ್ನಮ್ಮ ಮಾತನಾಡಿ,ನಮ್ಮಯ ಈ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬೀರಣ್ಣ ಬಿ.ಕೆ ಸರ್ ಅವರು ನಿಧನರಾಗಿರುವ ಸುದ್ದಿ ಕೇಳಿ ತುಂಬಾ ದುಃಖವಾಗಿದೆ,ಅವರು ನಮ್ಮ ಶಾಲೆಯಲ್ಲಿ ಸೇವೆ ಸಲ್ಲಿಸಿದವರು ಎಂಬುದು ನಮಗೆ ಹೆಮ್ಮೆಯ ಸಂಗತಿಯಾದರೆ,ಅವರು ಹಿರಿಯ ಸಾಹಿತಿಗಳು ಮತ್ತು ಅನೇಕ ಕೃತಿಗಳನ್ನು ರಚಿಸಿದ್ದರು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಅವರು ಚುಟುಕು ಸಾಹಿತಿಗಳಾಗಿ ಸದಾಕಾಲ ಪಾದರಸದಂತೆ ಕ್ರಿಯಾಶೀಲರಾಗಿದ್ದರು.ಎಲ್ಲಿಯೇ ಸಾಹಿತ್ಯದ ಕಾರ್ಯಕ್ರಮಗಳಿರಲಿ ಅಲ್ಲಿ ನಮ್ಮ ಬೀರಣ್ಣ ಬಿ.ಕೆ ಅವರು ಇರುತ್ತಿದ್ದರು.ಅಲ್ಲಿಯೆ ಚುಟುಕು ರಚಿಸಿ ಓದುವುದು ಅವರ ಮುಖ್ಯ ಹವ್ಯಾಸವಾಗಿತ್ತು.ಅಂತಹ ಮಹಾನ್ ಸಾಹಿತಿಯನ್ನು ಕಲೆದುಕೊಂಡು ಸಾಹಿತ್ಯ ಲೋಕ ಬಡವಾಗಿದೆ ಎಂದರು.
ಸಭೆಯ ಆರಂಭದಲ್ಲಿ ಬೀರಣ್ಣ ಬಿ.ಕೆ ಅವರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.ಸಭೆಯಲ್ಲಿ ಶಿಕ್ಷಕರಾದ ಮೌನೇಶ ಹಾಗು ಹಳೆಯ ವಿದ್ಯಾರ್ಥಿಗಳಾದ ಧರ್ಮರಾಜ ಸುಂಬಡ,ಬಸವರಾಜ,ಸುರೇಶ ಅಂಗಡಿ,ಶಿವರಾಜ ಮೊರಟಗಿ,ನಾಗರಾಜ ತಿಪ್ಪನಟಗಿ,ರಮೇಶ ಸೂಗುರ,ಪ್ರಶಾಂತ ಬಿರಾದಾರ ಸೇರಿದಂತೆ ಇತರರಿದ್ದರು.