ಕಲಬುರಗಿ : ಇಲ್ಲಿನ ರಂಗಾಯಣದಲ್ಲಿ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ ಅವರು, ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದು ಬಂದ ನಡೆಯನ್ನು ವಿವರಿಸಿದರು.
ಬಾಲ್ಯ ಕಾಲದಿಂದಲೂ ಜಾನಪದ ರಂಗಭೂಮಿಯಿಂದ ಆಕರ್ಷಕನಾಗಿ, ದೊಡ್ಡಾಟ, ಬಯಲಾಟ, ನಾಟಕಗಳಲ್ಲಿ ಭಾಗವಹಿಸಿ, ಜನಪದ ಹಾಡುಗಳನ್ನು ಹೇಳುತ್ತಾ ಬೆಳೆದು ಬಂದಿರುವುದಾಗಿ ತಿಳಿಸಿ, ಹಲವಾರು ನಾಟಕಗಳ ಹಾಡುಗಳನ್ನು ಹಾಡಿ ರಂಜಿಸಿದರಲ್ಲದೇ, ದೊಡ್ಡಾಟದ ಹೆಜ್ಜೆಗಳನ್ನು ಹಾಕಿ ತೋರಿಸಿದರು.
30-40ವರ್ಷಗಳ ಸುದೀರ್ಘ ರಂಗಾನುಭವಗಳನ್ನು ಹೊಂದಿರುವ ಕಲಾವಿದರು ತಮ್ಮ ಕಲೆಯ ಪ್ರಯೋಗಗಳ ಕುರಿತು , ನೋವು ನಲಿವುಗಳನ್ನು ಕುರಿತು ಆಸಕ್ತರ ಮುಂದೆ ಹೇಳಿ ಕೊಳ್ಳುವ ಅವಕಾಶವನ್ನು ಕಲಬುರಗಿ ರಂಗಾಯಣ ತನ್ನ ರಂಗಾಂತರಾಳ ಕಾರ್ಯಕ್ರಮದಲ್ಲಿ ನೀಡಿರುವುದು ಸಂತಸ ತಂದಿದೆ. ಅನುಭವ ಕಥನವನ್ನು ದಾಖಲಿಸಲಾಗದ ಕಲಾವಿದರಿಗೆ ಇದು ಸುವರ್ಣ ಅವಕಾಶ ನೀಡಿದಂತಾಗಿದೆ ಎಂದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿಯೂ ದುಡಿದ ಕಲಾವಿದರು ತಮ್ಮಕಲಾ ಸೇವೆ ಬಗ್ಗೆ ಮತ್ತು ರಂಗಭೂಮಿಯಲ್ಲಿ ಅವರು ಎದುರಿಸಿದ ಸವಾಲುಗಳು ತಿಳಿಸಿದರೆ, ಅವು ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡಬಲ್ಲವು ಎಂದರು.
ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಹಿರಿಯ ಪತ್ರಕರ್ತರಾದ ಶಿವರಾಯ ದೊಡ್ಡಮನಿ, ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ, ಪಟ್ಟಣಕರ್, ಸಾಯಿಬಣ್ಣ ಹೋಳ್ಕರ್ ಎಚ್.ಎಸ್. ಬಸವಪ್ರಭು ಇತರರು ಇದ್ದರು.
ರಂಗಾಯಣ ಕಲಾವಿದರಾದ ಮರಿಯಮ್ಮ ಆದೋನಿ ರಂಗಗೀತೆ ಪ್ರಸ್ತುತ ಪಡಿಸಿದರು. ಮಲ್ಲಿಕಾರ್ಜುನ ಪೂಜಾರಿ, ರಾಜು ತಬಲಾ ಸಾಥ್ ನೀಡಿದರು. ಭಾಗ್ಯ ಪಾಳಾ ನಿರೂಪಣೆ ಮಾಡಿದರು.