ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡು ಮರೆಯಬೇಕು ಲಿಂಗಪೂಜೆಯಾದಡು ಮರೆಯಬೇಕು
ಜಂಗಮ ಮುಂದೆ ನಿಂದಿದಡು ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಭಕ್ತನಾದವನು ಕಡ್ಡಾಯವಾಗಿ ಕಾಯಕ ಮಾಡಲೇಬೇಕು. “ಕೃತ್ಯ ಕಾಯಕವಿಲ್ಲದವನು ಭಕ್ತರಲ್ಲ, ಸತ್ಯಶುದ್ಧವಿಲ್ಲದುದು ಕಾಯಕವಲ್ಲ” ಎಂದು ಉರಿಲಿಂಗಪೆದ್ದಿಗಳ ಪುಣ್ಯಸ್ತ್ರಿ ಕಾಳವ್ವೆ ಈ ಮಾತನ್ನು ಹೇಳುವ ಮೂಲಕ ಕಾಯಕದ ಮಹತ್ವವನ್ನು ತಿಳಿಸುತ್ತಾಳೆ. ನಾವು ಮಾಡುವ ಕಾಯಕವನ್ನು ಸತ್ಯಶುದ್ಧವಾಗಿರಬೇಕು. ನಾವು ಮಾಡುವ ಕೆಲಸದಲ್ಲಿ ಸತ್ಯ ಮತ್ತು ಶುದ್ಧತೆ ಇಲ್ಲದಿದ್ದರೆ ಅದು ಕಾಯಕವಾಗುವುದಿಲ್ಲ. ಶರಣ ಆಯ್ದಕ್ಕಿ ಮಾರಯ್ಯನವರು ಮೇಲಿನ ವಚನದಲ್ಲಿ ಗುರು-ಲಿಂಗ-ಜಂಗಮಕ್ಕಿಂತಲೂ ಕಾಯಕ ಶ್ರೇಷ್ಠ ಎಂದು ಹೇಳುತ್ತಾರೆ.
ಶರಣರು ಕಾಯಕಕ್ಕೆ ಧರ್ಮದ ಚೌಕಟ್ಟಿನಲ್ಲಿ ಸ್ಥಾನ ನೀಡಿ ಶ್ರಮಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಅನೇಕ ಧರ್ಮಗಳು ಕಾಯಕದ ಬಗ್ಗೆ ಮಾತನಾಡುವುದಿಲ್ಲ. ಆದರೆ ಶರಣ ಧರ್ಮದಲ್ಲಿ ಕಾಯಕವೇ ಕೈಲಾಸವಾಗಿದೆ. ಸತ್ಯಶುದ್ಧ ಕಾಯಕ ಮಾಡುವುದರಿಂದ ನಮ್ಮ ಬದುಕು ಹಸನವಾಗುತ್ತದೆ. ಕಾಯಕದಿಂದ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಸಿಗುತ್ತದೆ. ನಾವು ಶಾರೀರಿಕ ಶ್ರಮವನ್ನು ಮಾಡಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅಧುನಿಕ ದಿನಮಾನಗಳಲ್ಲಿ ಶಾರೀರಿಕ ಶ್ರಮ ಅವಶ್ಯವಾಗಿದೆ. ದಿನನಿತ್ಯ ನಾವು ಯೋಗ, ವ್ಯಾಯಾಮ, ವ್ಯಾಯುವಿಹಾರ ಮಾಡಿದರೆ ಮಾತ್ರ ನಾವು ನಿರೋಗಿಯಾಗಿ ಬಾಳಲಿಕ್ಕೆ ಸಾಧ್ಯ. ಚನ್ನಬಸವ ಪಟ್ಟದ್ದೇವರು ದಿನನಿತ್ಯ ಎರಡು ಮೂರು ತಾಸು ಗುದ್ದಲಿ ಹಿಡಿದುಕೊಂಡು ಕಾಯಕ ಮಾಡುತ್ತಿದ್ದರು. ದಿನಾಲು ಏನಾದರೂ ಕಾಯಕ ಮಾಡಿದರೆ ಅವರಿಗೆ ಸಮಾಧಾನವಾಗುತ್ತಿತ್ತು. ಅವರು ಕಾಯಕಜೀವಿಗಳ ಆಗಿರುವುದರಿಂದಲೇ ನೂರಾಒಂಭತ್ತು ವರ್ಷ ನಿರೋಗಿಯಾಗಿ ಬದುಕಲಿಕ್ಕೆ ಸಾಧ್ಯವಾಯಿತು.
ಕಾಯಕ ಮಾಡದೆ ಉಣ್ಣುವ ಹಕ್ಕು ನಮಗಿರುವುದಿಲ್ಲ. ನಾವು ಸ್ವಾವಲಂಬಿಯಾಗಬೇಕಾದರೆ ಕಾಯಕ ಅನಿವಾರ್ಯ. ಮಾಡಲೇಬೇಕು. ನಾವು ಸ್ವತಃ ಕಾಯಕ ಮಾಡಿ ಊಟ ಮಾಡುವುದು ಎಂದರೆ ಬಿಸಿ ಅನ್ನ ಉಂಡ ಹಾಗೆ. ನಮ್ಮ ತಂದೆ ತಾಯಿಗಳು ಗಳಿಸಿರುವ ಸಂಪತ್ತಿನಿಂದ ಜೀವನ ನಡೆಸುವುದೆಂದರೆ, ತೊಂಗಳು ಅನ್ನ ಉಂಡ ಹಾಗೆ. ಹೆಣ್ಣು ಹೆತ್ತವರಿಂದ ವರದಕ್ಷಣೆ ಪಡೆದು ಆ ದುಡ್ಡಿನಲ್ಲಿ ಬದುಕಿದರೆ ಅದು ಹಳಸಿದ ಅನ್ನ ಉಂಡ ಹಾಗೆ. ಯಾವ ಅನ್ನ ಉಣ್ಣುಬೇಕು ಎಂಬುದನ್ನು ನೀವೆ ನಿರ್ಧರಿಸಬೇಕು.
ವಿಶ್ವಗುರು ಬಸವಣ್ಣನವರು ಕಾಯಕ ತತ್ವವನ್ನು ನೀಡಿ ಕಲ್ಯಾಣ ರಾಜ್ಯವೇ ಸಂಪತ್ತಭರಿತವಾಗಿ ಮಾಡಿದರು. ಕಲ್ಯಾಣದಲ್ಲಿ “ನೀಡುವವರುಂಟು ಬೇಡುವವರಿಲ್ಲ, ಬೇಡುವರಿಲ್ಲದ ಕಾರಣ ನಾನು ಬಡವನಾದೇನಯ್ಯ” ಎಂಬ ಬಸವವಾಣಿಯನ್ನು ನೋಡಿದರೆ ಕಲ್ಯಾಣ ರಾಜ್ಯ ಎಷ್ಟು ಸಮೃದ್ಧವಾಗಿತ್ತು ಎಂದು ಗೊತ್ತಾಗುತ್ತದೆ. ಕಾಯಕದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಿ ಎಲ್ಲಾ ಕಾಯಕವು ಸಮಾನವೆಂದು ಸಾರಿದರು. ಹಾಗಾಗಿ ಕಲ್ಯಾಣ ರಾಜ್ಯ ಸುಖಿರಾಜ್ಯವಾಯಿತು.