ನೀಲೂರ ನಿಂಬೆಕ್ಕ, ಕೋಳೂರ ಕೊಡಗೂಸು, ಧೂಪದ ಗೊಗ್ಗವ್ವೆ

0
20

ಕನ್ನಡ ನಾಡಿನ ಶಿವಶರಣೆಯರಲ್ಲಿ ನೀಲೂರ ನಿಂಬೆಕ್ಕ, ಕೋಳೂರ ಕೊಡಗೂಸು, ಗೊಗ್ಗವ್ವೆ ರೆಬ್ಬವ್ವೆ, ಗುಡ್ಡವ್ವೆ, ಪಿಟ್ಟವ್ವೆ, ಸತ್ಯಕ್ಕ ಮುಂತಾದವರ ಹೆಸರುಗಳನ್ನು ಪಂಡಿತಾರಾಧ್ಯರಾದಿಯಾಗಿ ಹರಿಹರ, ಪಾಲ್ಕುರಿಕಿ ಸೋಮನಾಥ, ಭೀಮಕವಿ ಸೇರಿದಂತೆ ಎಲ್ಲರೂ ಉಲ್ಲೇಖಿಸುತ್ತಾರೆ. ಇವರಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳನ್ನು ಕೂಡ ಹೇಳುತ್ತಾರೆ. ಆದರೆ ಪೌರಾಣಿಕ ಕಥೆಗಳ ಆಶಯಗಳು ವಾಸ್ತವ ಸಂಗತಿ ಅರಿತುಕೊಳ್ಳಲು ಸಹಕಾರಿಯಾಗುತ್ತವೆ.

ನೀಲೂರ ನಿಂಬೆಕ್ಕ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದವರು. ಈ ಗ್ರಾಮದಲ್ಲಿ ಸುಮಾರು ೧೦,೦೦೦ದಷ್ಟು ಜನ ಮಾಲಗಾರರ ವೃತ್ತಿಗೆ ಸಂಬಂಧಿಸಿದವರು ವಾಸಿಸುತ್ತಿದ್ದಾರೆ. ನಿಂಬೆಕ್ಕ ಈ ಜನಾಂಗಕ್ಕೆ ಸೇರಿದ ಮುಗದಿಯವರ ಮನೆತನಕ್ಕೆ ಸಂಬಂಧಿಸಿದ ಮಹಿಳೆ. ಸಂಗಣ್ಣ-ಶೀಲವಂತೆ ದಂಪತಿಯ ಉದರದಿಂದ ಜನಿಸಿದರು. ಇವರಿಗೆ ಸಿಂದಗಿ ತಾಲ್ಲೂಕಿನ ಬೋರಗಿಗೆ ಮದುವೆ ಮಾಡಿ ಕೊಟ್ಟಿದ್ದರು. ಶಿವಾನಂದ ಎಂಬ ಮಗ ಕೂಡ ಇದ್ದ. ಮಗ ಹುಟ್ಟಿದ ಕೆಲವು ದಿನಗಳಲ್ಲೇ ಪತಿ ಅಕಾಲಿಕ ಮೃತ್ಯುವಿಗೆ ತುತ್ತಾಗುತ್ತಾನೆ. ಆಗ ನಿಂಬೆಕ್ಕ ಅನಿವಾರ್ಯವಾಗಿ ತವರು ಮನೆಗೆ ಬಂದು, ಸಭ್ಯ ಗೃಹಸ್ಥರ ಮನೆಗೆ ನೀರು ಹೊತ್ತು ಹಾಕುವ ಕಾಯಕ ಮಾಡುತ್ತಿದ್ದಳು ಎಂಬ ಕಥೆ ಹೇಳಲಾಗುತ್ತಿದೆ.

Contact Your\'s Advertisement; 9902492681

“ಎಮ್ಮ ತಾಯಿ ನಿಂಬೆವ್ವೆ ನೀರನೆರೆದು ಉಂಬುವಳು” ಎಂದು ಬಸವಣ್ಣನವರು ತಮ್ಮೊಂದು ವಚನದಲ್ಲಿ, ಆದಯ್ಯ ತನ್ನ ಎರಡು ವಚನಗಳಲ್ಲಿ, ಭೀಮಕವಿ ತನ್ನ ಬಸವ ಪುರಾಣದಲ್ಲಿ “ಶಿವನ ಭಕ್ತರ ಮನೆಗೆ ಅಗ್ಗವಣಿಯನ್ ಅಡಕುವಳು” ಎಂದು ನಿಂಬೆಕ್ಕನ ಹೆಸರು ಹಾಗೂ ಆಕೆಯ ಕಾಯಕವನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಹಿಂದಿನ ಕವಿಗಳು ಹಾಗೂ ವನಕಾರರ ಉಲ್ಲೇಖ ಹಾಗೂ ಗ್ರಾಮದಲ್ಲಿ ಸಿಗುವ ಮಾಹಿತಿ ಗಮನಿಸಿದರೆ ನಿಂಬೆಕ್ಕ ಇದೇ ಊರಿನವರೇ ಎಂಬುದು ಖಾತ್ರಿಯಾಗುತ್ತದೆ. ಇವರು ಕಲ್ಯಾಣವನ್ನು ಕಂಡು ಬಂದಿರಬೇಕು ಎಂದೆನಿಸುತ್ತದೆ.

ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಜೊತೆಗೆ ನಿಂಬೆಕ್ಕನ ದೇವಾಲಯ ಕೂಡ ಇಲ್ಲಿದ್ದು,”ನೀಲೂರಿನಂಥ ಊರಿಲ್ಲ. ನಿಂಬೆಕ್ಕನಂಥ ಶರಣೆಯಿಲ್ಲ” ಎಂಬ ಗಾದೆ ಈ ಭಾಗದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಇವರ ಹೆಸರಿನಲ್ಲೀಗ ವರ್ಷಕ್ಕೊಮ್ಮೆ ಜಾತ್ರೆ, ರಥೋತ್ಸವ ನಡೆಯುತ್ತದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಇವರ ಮನೆತನಕ್ಕೆ ಈಗಲೂ ವಿಶೇಷ ಚಾಜಾಗಳಿವೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಕೋಳೂರ ಕೊಡಗೂಸು: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕನ್ಯಕೋಳೂರು ಕೊಡಗೂಸಿನ ಗ್ರಾಮ. ಈಕೆಯ ಹೆಸರು ಮೊದಲ ಹೆಸರು ಚನ್ನಮ್ಮ. ಗ್ರಾಮದ ಹೂಗಾರ ಮನೆತನಕ್ಕೆ ಸಂಬಂಧಿಸಿದವರು ಎಂದು ಆ ಮನೆತನದನವರು ಹೇಳುತ್ತಾರೆ. ಮುಗ್ಧಭಕ್ತಿ ಕುರಿತು ಕೋಳೂರು ಕೊಡಗೂಸಿನ ಹೆಸರನ್ನು ಹತ್ತಾರು ಶರಣರು, ನಡುಗನ್ನಡ ಕಾಲದ ಎಲ್ಲ ಸಾಹಿತಿಗಳು ಪ್ರಸ್ತಾಪಿಸುತ್ತಾರೆ. “ಹಸುಳೆಯ ಕೈಯ ಹಾಲನಾರು ಕಿತ್ತುಕೊಂಬರು” ಎಂದು ಅಲ್ಲಮಪ್ರಭುಗಳೇ ಹೇಳುತ್ತಾರೆ.

ಗ್ರಾಮದಲ್ಲಿರುವ ಚೆನ್ನಕೇಶ್ವರಿ ದೇವಾಲಯವು ಈ ಮೊದಲು ಕಲ್ಲಿನಾಥ (ಸೋಮೇಶ್ವರ) ದೇವಾಲಯ ಆಗಿತ್ತು. ಚೆನ್ನಮ್ಮನ ತಂದೆ-ತಾಯಿ ಊರಿಗೆ ತೆರಳಿದಾಗ ದಿನಾಲು ನಾಲ್ಕು ಸೇರು ಹಾಲು ಶಿವನಿಗೆ ಒಪ್ಪಿಸಿ ಬರಬೇಕು ಎಂದು ಹೇಳಿದಾಗ ಶಿವ ಕುಡಿಯಲಿಲ್ಲ. ಆದರೆ ಆ ಮುಗ್ಧ ಹುಡಗಿ ತಲೆ ಚಚ್ಚಿಕೊಂಡಾಗ ಶಿವ ಪ್ರತ್ಯೇಕ್ಷವಾಗಿ ಹಾಲು ಕುಡಿದ ಎಂಬ ಪೌರಾಣಿಕ ಕಥೆ ಕೂಡ ಇದೆ.

ಗೊಗ್ಗವ್ವೆ: ಗೊಗ್ಗವ್ವೆ ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪದ ಮಹಾಗಾಂವ ಗ್ರಾಮದವರು. ಕಲ್ಯಾಣದ ಕೀರ್ತಿವಾರ್ತೆ ಕೇಳಿ ಕೇರಳದ ಅವಲೂರಿನಿಂದ ಇಲ್ಲಿಗೆ ಬಂದವರು. ದೇವರ ಮುಂದೆ ದೀಪ ಹಚ್ಚುವ, ಧೂಪ ಹಾಕುವುದು ಇವಳ ಕಾಯಕ ಮಾಡುತ್ತಿದ್ದಳು. “ಈಕೆ ವಯಸ್ಸಿಗೆ ಬಂದಾಗ ಮದುವೆ ಬೇಡವೆನ್ನುತ್ತಾಳೆ. ಮದುವೆ ಕುರಿತು ಒತ್ತಾಯಿಸಿದ ತಂದೆ-ತಾಯಿ ಕೊನೆಗೆ ಸುಮ್ಮನಾಗುತ್ತಾರೆ. ಆದರೆ ಒಂದು ದಿನ ಶಿವನೇ ಬಂದು ಮದುವೆಯಾಗು ಎಂದಾಗ ಅವನಿಗೂ ಆಕೆ ಒಲಿಯಲಿಲ್ಲ” ಎಂಬ ಕಥೆಯನ್ನು ಹೇಳಲಾಗುತ್ತಿದೆ.

ಗ್ರಾಮದ ಕೆರೆಯ ದಂಡೆಯ ಮೇಲೆ ಇವರ ಹೆಸರಿನ ದೇವಾಲಯವಿದೆ. ಎದುರಿಗೆ ಅಗ್ಗಿಷ್ಟಿಕೆಗೆ ಜಾಗವಿದೆ. ಗ್ರಾಮಸ್ಥರು ಮಂಗಳ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿ ಧೂಪ ಹಾಕಿ ಮುಂದುವರಿಯುತ್ತಾರೆ. ಇಲ್ಲಿ ಈಗಲೂ ಸಂಪ್ರದಾಯ, ಮೂಢನಂಬಿಕೆ ಆಚರಿಸುವುದಿಲ್ಲ. ಗೊಗ್ಗವ್ವೆ ದೇವಸ್ಥಾನದ ಮುಂದೆ ಮದುವೆ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here