ಶರಣ ಚರಿತೆ: ಶರಣರ ಮಂತ್ರ ತತ್ವ

0
10

ಪಕ್ಕಾ ಪ್ರಯೋಗಾತ್ಮಕ ತತ್ವಜ್ಞಾನವನ್ನು ಬೋಧಿಸುವುದು ಮಾತ್ರವಲ್ಲ ಅದನ್ನು ಬದುಕಿನ ಉಸಿರಾಗಿಸಿಕೊಂಡಿದ್ದ ಬಸವಾದಿ ಶರಣರು, ಬದುಕಿನ ರಕ್ಷಾ ಕವಚದಂತಿರುವ ೧)ಗುರು ೨)ಲಿಂಗ ೩) ಜಂಗಮ ೪) ಪಾದೋದಕ ೫) ಪ್ರಸಾದ ೬) ವಿಭೂತಿ ೭) ರುದ್ರಾಕ್ಷಿ ೮) ಮಂತ್ರ ಎಂಬ ಅಷ್ಠಾವರಣ ತತ್ವವನ್ನು ಹೇಳಿದ್ದಾರೆ. ಇವು ಒಂದಕ್ಕೊಂದು ಬೇರೆ ಬೇರೆ ಅನಿಸಿದರೂ ಪರಸ್ಪರ ಅವಲಂಬಿತವಾದವುಗಳು. ಮೇಲಾಗಿ ಸ್ವತಂತ್ರವಾದವುಗಳು ಕೂಡ! ತನು, ಮನ, ಶುದ್ಧಿಯಾಗಿರಬೇಕು. ಶಿವನನ್ನು ಒಲಿಸಲು ಬಂ ಈ ಕಾಯ ಸಟೆ ಅಲ್ಲ, ದಿಟ ಎಂದು ನಂಬಿದವರು ಮಾತ್ರ ಅಷ್ಟಾವರಣ ಸಂಪನ್ನರಾಗಲು ಸಾಧ್ಯ ಎಂಬುದು ಶರಣರ ಅಭಿಮತ.

ಮಂತ್ರ: ವಿಭಿನ್ನ ಆಚರಣೆ, ಭಿನ್ನ, ಭಿನ್ನ ತತ್ವಾಲೋಚನೆ ಇರುವ ಪ್ರಸ್ತುತ ಈ ಸಂದರ್ಭದಲ್ಲಿ ಅಷ್ಟಾವರಣಗಳಲ್ಲಿ ಒಂದಾದ ಮಂತ್ರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಂತ್ರ ಬೇರೆ ಯಾರಿಂದಲೋ ಹುಟ್ಟುವುದಲ್ಲ. ಅದು ನಮ್ಮ ಶಿರಸ್ಸಿನಲ್ಲಿಯೇ ಉದಯವಾಗುತ್ತದೆ ಎಂದು ಚೆನ್ನಬಸವಣ್ಣ ಹೇಳುತ್ತಾರೆ. ಮಂತ್ರ ಎಲ್ಲ ತತ್ವಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವುದರಿಂದ ಅದು ಮಹಾ ತತ್ವ, ಮಂತ್ರರಾಜ ಎಂಬುದು ಉರಿಲಿಂಗಿ ಪೆದ್ದಿ ಹೇಳುತ್ತಾರೆ. “ಮಂತ್ರದಿಂದ ಉದಯವಾದಾತ ಚನ್ನಬಸವಣ್ಣನ ಸೋದರ ಮಾವ ಬಸವಣ್ಣ” ಎಂದು ಅಕ್ಕನಾಗಮ್ಮ ಹೇಳುತ್ತಾರೆ

Contact Your\'s Advertisement; 9902492681

ಲಿಂಗಾರ್ಚನೆ ಮಾಡುವುದೆ ಮಂತ್ರ, ಪ್ರಸಾದ ಸ್ವೀಕರಿಸುವುದೇ ಮಂತ್ರ, ಅನ್ಯ ಸತಿಯರನ್ನು ನೋಡದಿರುವುದೇ ಮಂತ್ರ, ಸತ್ಯದ ದಾರಿಯಲ್ಲಿ ಹೆಜ್ಜೆ ಹಾಕುವುದೇ ಮಂತ್ರ ಎಂದು ಶಿವಯೋಗಿ ಸಿದ್ಧರಾಮ ಹೇಳುತ್ತಾರೆ. ಮಂತ್ರದಿಂದ ಮನೋವಿಲಾಸ ಕಂಡು ಮೂರ್ತಿ ಅರಿಯಬೇಕು. ಅದನ್ನು ಅರಿತಾಗ ಮಾತ್ರ ನಿರಂಗಿಸಂಗಿಗಳಾಗಲು ಸಾಧ್ಯ ಎಂದು ನೀಲಾಂಬಿಕೆಯ ನಿಲುವು. ಹೀಗೆ ಘಟ್ಟಿವಾಳಯ್ಯ, ಆದಯ್ಯ, ಮಡಿವಾಳ ಮಾಚಿದೇವ ಸೇರಿದಂತೆ ಬಹುತೇಕ ವಚನಕಾರರು ಅಂಗವನ್ನು ಲಿಂಗವನ್ನಾಗಿ ಪರಿವರ್ತಿಸುವ, ಸಹಜವಾಗಿ ಅಳವಡಿಸಿಕೊಳ್ಳಬಹುದಾದ, ಸರಳ ತಾತ್ವಿಕ-ಸಾತ್ವಿಕ ಚಿಂತನೆಯನ್ನು ಹೇಳುತ್ತಾರೆ.

ಆದರೆ ಇಂದು ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತಾಗಿದೆ. ಮಂತ್ರದಿಂದ ಹುಟ್ಟಿದ ಧನ ಸಂಪಾದನೆ, ಆಸೆಯಿಂದಾಗಿ ಕುಮಂತ್ರ ಹೇಳುವುದೆಲ್ಲ ಕುಚೇಷ್ಟೆಗೆ ಕಾರಣವಾಗುತ್ತದೆ. ಅದು ಹೌದನ್ನು ಅಲ್ಲವಾಗಿಸುತ್ತದೆ. ಅಲ್ಲವನ್ನು ಹೌದಾಗಿಸುತ್ತದೆ. ಇದು ಮಂತ್ರಕ್ಕೆ ಮಾಡುವ ಅಪಚಾರ ಎಂಬ ಕಟು ವಾಸ್ತವವನ್ನು ಅಂಬಿಗರ ಚೌಡಯ್ಯ ತೆರೆದಿಡುತ್ತಾರೆ. ಜಡವಾಗಿರುವುದು ಮಂತ್ರವಲ್ಲ. ಘನಕ್ಕೆ ಘನವಾದ ವಸ್ತು ತಾನೆ ಮಂತ್ರ ಎಂಬುದು ಅಲ್ಲಮನ ಉವಾಚ.

ಅಜಾತನನ್ನು ಒಲಿಸದಿದ್ದರೆ ಮಂತ್ರವಲ್ಲ ಎಂಬುದನ್ನು ಹೇಳಿದ ಬಸವಾದಿ ಶರಣರು ದೇವನೊಲಿದ ಭಕ್ತನಿಗೆ ಮಂತ್ರ ಬೇಕಿಲ್ಲ. ತನುಮನ ಶುದ್ಧವಿದ್ಧವರಿಗೆ ಮಂತ್ರದ ಹಂಗಿಲ್ಲ. ನಡೆ-ನುಡಿ ಒಂದಾದವರಿಗೆ, ಸಂಸ್ಕೃತಿ-ಸಂಸ್ಕಾರ ಹೊಂದಿದವರಿಗೆ ಮಂತ್ರದ ಕೊರತೆ ಕಾಡುವುದಿಲ್ಲ ಎಂದಿದ್ದಾರೆ. ಬಸವಣ್ಣನಿಂದ ಬದುಕಿತ್ತೀ ಲೋಕ, ಬಸವನ ನಾಮಸ್ಮರಣೆಯೇ ಸಾಕು ಎಂದು ಅಲ್ಲಮ ಉದ್ಗಾರ ತೆಗೆದಿದ್ದಾನೆ. ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ, ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರದಿಂದ ಮುಕ್ತಿಗೆ ದಾರಿ. ಮನನ ಮಾಡಿದ ಮಂತ್ರ ಮಹಾ ಪದವಿ ತಂದುಕೊಡುತ್ತದೆ. ಲಿಂಗ ವಿಶ್ವಾಸದಿಂದ ಅಗಣಿತ ಫಲ ಸಿಗುತ್ತದೆ. ಮಂತ್ರ ತಿಳಿಯದೆ ಜಪಿಸುವುದು ನಿಷ್ಫಲ. ಮಾಂಸಪಿಂಡರು ಮಂತ್ರ ಪಿಂಡರಾಗುವುದು ಹೇಗೆ ಇದಕ್ಕೆ ಶರಣರಲ್ಲದೆ ಬೇರೆ ಸಾಕ್ಷಿ ಬೇಕೆ?

-ಡಾ. ಜಯಶ್ರೀ ದಂಡೆ
ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here