ಶಿವಶರಣೆ ಅಕ್ಕಮಹಾದೇವಿ: ಶರಣ ಚರಿತೆ

0
19

ಅಂಗಗುಣ ಅಳಿದು ಲಿಂಗಗುಣ ಸಂಪನ್ನೆಯಾದ ಮಹಾದೇವಿಯಕ್ಕ ತನಗೆ ಎದುರಾದ ಸಮಸ್ಯೆ-ಸವಾಲುಗಳನ್ನು ಚಿತ್ತ ಸಮಾಧಾನದಿಂದ ಎಂದುರಿಸಿದವಳು. ಉಡುತಡಿಯಿಂದ ಬಸವಕಲ್ಯಾಣ, ಅಲ್ಲಿಂದ ಶ್ರೀಶೈಲದವರೆಗೆ ಈಕೆ ಕ್ರಮಿಸಿದ ಹಾದಿ ಕಲ್ಲು, ಮುಳ್ಳುಗಳಿಂದ ಕೂಡಿತ್ತು.

ಅಕ್ಕನ ಸೌಂದಯ್ಯಕ್ಕೆ ಮಾರು ಹೋದ ಕೌಶಿಕ ಮಹಾರಾಜನನ್ನು ಮದುವೆಯಾಗಿ ಬಹಳ ಜಾಣ್ಮೆಯಿಂದ ಉತ್ತರ ಕೊಟ್ಟು ಅಲ್ಲಿಂದ ಹೊರಬಂದು ಕೊನೆಗೆ ಆದರ್ಶದ ಮೆಟ್ಟಿಲು ಏರಿದವಳು. “ನಿಮ್ಮ ಮುಡಿಗೆ ಹೂ ತರುವೆನ್ನಲ್ಲದೆ, ಹುಲ್ಲ ತಾರೆನು” ಎಂದು ಭರವಸೆಯನ್ನಿತ್ತು ಅತ್ಯಂತ ಆತ್ಮವಿಶ್ವಾದಿಂದ ಹೆಜ್ಜೆ ಹಾಕಿದಾಕೆ.

Contact Your\'s Advertisement; 9902492681

ಉಡುತಡಿ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಿಂದ ಕೇವಲ 5 ಕಿ.ಮೀ. ದೂರದಲ್ಲಿ ಉಡಗಣಿ ಎಂಬ ಗ್ರಾಮವಿದ್ದು, ಊರ ಹೊರಗಿನ ಪಶ್ಚಿಮ ದಿಕ್ಕಿನಲ್ಲಿ ಅಕ್ಕಮಹಾದೇವಿಯ ಸ್ಮಾರಕವನ್ನು ಕಾಣಬಹುದು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಆರಂಭದಲ್ಲಿ ಡಾ. ಬಿ.ಡಿ. ಜತ್ತಿ ಮತ್ತಿತರರು ಶ್ರಮಿಸಿದವರು. ನಂತರ ಲೀಲಾದೇವಿ ಆರ್. ಪ್ರಸಾದ ಅವರ ನಿರಂತರ ಪ್ರಯತ್ನದಿಂದಾಗಿ 10 ಎಕರೆ ಜಾಗದಲ್ಲಿ ಅಕ್ಕಮಹಾದೇವಿಯ ನೂತನ ಸ್ಮಾರಕ ನಿರ್ಮಾಣವಾಗಿದೆ. ಅಕ್ಕನ ಶಿಲಾಮೂರ್ತಿಯಿದ್ದು, ಸುತ್ತಲೂ ಕಂದಕವಿರುವುದನ್ನು ಕಾಣಬಹುದು.

ಇಲ್ಲಿಯೇ ಕೌಶಿಕನ ಅರಮನೆ ಇತ್ತು ಎಂಬ ಅನುಮಾನ ಬರುತ್ತದೆ. ಇಲ್ಲಿಂದ ಉತ್ತರಕ್ಕೆ ಪರದೇಶಿ ಮಲ್ಲಿಕಾರ್ಜುನ ದೇವಸ್ಥಾನವಿದೆ. ಇಲ್ಲೊಂದು ಅಕ್ಕನ ಶಿಲಾಮೂರ್ತಿಯಿದೆ. ದೇವಸ್ಥಾನದ ಎದುರಿಗೆ ಹಳೆಯ ಕಾಲದ ಕಲ್ಯಾಣಿಯಿದೆ. ಇಲ್ಲಿಂದ ಉತ್ತರಕ್ಕೆ ಹೋದರೆ ತಡಗುಣಿ ಎನ್ನುವ ಗ್ರಾಮವಿದ್ದು, ಈ ಉಡುಗಣಿ ತಡಗುಣಿ ಈ ಹೆಸರುಗಲ್ಲಿ ಚಾರಿತ್ರಿಕ ಸಂಗತಿ ಅಡಗಿದ್ದು, ಅಕ್ಕಮಹಾದೇವಿಯನ್ನು ಇಲ್ಲಿಯೇ ಉಡುಗೆ ತೊಡಿಸಿ ಬೀಳ್ಕೊಡಲಾಯಿತು. ಉಡುಗೆ ತೊಟ್ಟು ಹೋದಳು ಎಂದು ಅಲ್ಲಿನ ಜನ ಹೇಳುತ್ತಾರೆ.

ಹಿರೇಕಸವಿ: ಉಡುತಡಿಯಿಂದ ಪಶ್ಚಿಮಕ್ಕೆ 2 ಕಿ. ಮೀ. ಅಂತರದಲ್ಲಿ ಹಿರೇಕಸವಿ ಗ್ರಾಮವಿದ್ದು, ಅಲ್ಲಿನ ಹೊಲವೊಂದರಲ್ಲಿ ಲಿಂಗಮುದ್ರೆ ಇರುವ ಕಲ್ಲು, ಕಲ್ಲು ಕಂಭಗಳು ಸಿಗುತ್ತವೆ. ಆಗ ಅರಮನೆ ಇಲ್ಲಿಯೇ ಇದ್ದಿತ್ತೇನೋ! ಅರಮನೆಯಿಂದ ಉಡುತಡಿಗೆ ಸುರಂಗ ಮಾರ್ಗವಿತ್ತು. ಇಲ್ಲಿಂದ ಕೌಶಿಕ ಉಡುತಡಿಗೆ ಹೋಗುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೇ ಗ್ರಾಮದಲ್ಲಿ ಹಿರೇಮಠವೊಂದಿದ್ದು, ಅದರ ಎದುರಿಗೆ ಸಿದ್ಧರಾಮೇಶ್ವರ ಗುಡಿ ಇದೆ. ಕೌಶಿಕ ಬಳಿಸಿದ ಲಿಂಗಮುದ್ರೆಯುಳ್ಳ ಖಡ್ಗ, ಬಟ್ಟಲು ಹಾಗೆಯೇ ರಕ್ಷಿಸಿಕೊಂಡು ಬರಲಾಗಿದೆ.

ಮಹಾಗಾಂವ-ನಾರಾಯಣಪುರ: ಕಲ್ಯಾಣದ ಕೀರ್ತಿವಾರ್ತೆ ಕೇಳಿ ಉಡುತಡಿಯಿಂದ ಬಸವಕಲ್ಯಾಣಕ್ಕೆ ಹೊರಟಿದ್ದ ಅಕ್ಕಮಹಾದೇವಿ 490 ಕಿ.ಮೀ. ದಾರಿ ಕ್ರಮಿಸಿ ಕಲಬುರಗಿ ಜಿಲ್ಲೆಯ ಮಹಾಗಾಂವಕ್ಕೆ ಬಂದು ತಲುಪುತ್ತಾಳೆ. ಗಂಡೋರಿ ನಾಲೆಯ ದಡದಲ್ಲಿ ಅಕ್ಕನ ಸ್ಮಾರಕವಿದೆ. ಊರೊಳಗೆ ಸಂಗನಾಥನ ಕಟ್ಟೆ, ಮಲ್ಲಿಕಾರ್ಜುನ ದೆವಾಲಯ, ರೇವಣಸಿದ್ಧೇಶ್ವರ ದೇವಾಲಯ ಮುಂತಾದ ಹಳೆಯ ಸ್ಮಾರಕಗಳಿವೆ. ಬಸವಕಲ್ಯಾಣದಿಂದ 4-5 ಕಿ. ಮೀ. ದೂರದಲ್ಲಿ ಕಲ್ಯಾಣಿ ಚಾಲೂಕ್ಯರ ಕಾಲದ ದೊಡ್ಡ ಶಿವ ಮಂದಿರವಿದೆ. ಅಕ್ಕಮಾಹದೇವಿ ಹೆಸರಿನ ಮಠವೊಂದಿದ್ದು, ಗಿಡದ ಕೆಳಗೆ ಕಟ್ಟೆ. ಕಟ್ಟೆಯ ಮೇಲೊಂದು ಅಕ್ಕನ ಪುರಾತನ ಶಿಲಾಮೂರ್ತಿ ಇರುವುದನ್ನು ನೋಡಬಹುದು.

ಶ್ರೀಶೈಲ: ಅಣ್ಣನ ಅನುಭವ ಮಂಟಪದಲ್ಲಿ ಅಲ್ಲಮನ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದ ಅಕ್ಕಮಹಾದೇವಿ ಬಸವಕಲ್ಯಾಣದಿಂದ ಸುಮಾರು 409 ಕಿ.ಮೀ. ದೂರದ ಶ್ರೀಶೈಲದವರೆಗೆ ನಡೆದು ಬಂದು ತಲುಪುತ್ತಾಳೆ. ಶ್ರೀಶೈಲದಲ್ಲಿ ಮಲ್ಲಿಕಾರ್ಜುನ ದೇವಾಲಯದ ಸುತ್ತಲಿನ ಪರಿಸರದಲ್ಲಿ ಅಕ್ಕನ ಪುರಾತನ ಕಾಲದ ಶಿಲಾಮೂರ್ತಿಯ ಜೊತೆಗೆ ಕಂಚಿನ ಪ್ರತಿಮೆ ಇದೆ. ಇಲ್ಲಿಂದ ಸುಮಾರು 600 ಮೆಟ್ಟಿಲು ಇಳಿದು ಪಾತಾಳಗಂಗೆ ತಲುಪಿ ದೋಣಿ ಮೂಲಕ 22 ಕಿ.ಮಿ. ನದಿಯೊಳಗೆ ಹೋದರೆ ಅಕ್ಕನ ಗವಿ ಸಿಗುತ್ತದೆ.

ಇದರ ಪ್ರವೇಶದ್ವಾರ ಇಕ್ಕಟ್ಟಾಗಿದ್ದು, ಕದಳಿಗೆ ಹೋಗುವ ಮುನ್ನ ಅಕ್ಕ ಇಲ್ಲಿಯೇ ಪೂಜೆ, ಧ್ಯಾನ ಮಾಡಿದ್ದಳು ಎನ್ನಲಾಗುತ್ತಿದೆ. ಈ ಗವಿ ದಾಟಿ ಚಿಂಚರ ಸಹಾಯದಿಂದ ಕದಳಿ ಗವಿಗೆ ತಲುಪಬೇಕು. ಈ ಗವಿ ಕೂಡ ತನ್ನಿಂದ ತಾನೆ ಏಕಶಿಲೆಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಅಕ್ಕನ ಎರಡು ಶಿಲಾಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಡಾ. ಜಯಶ್ರೀ ದಂಡೆ
ಸ್ಥಳ: ಬಸವ ಸಮಿತಿ, ಅನುಭವ ಮಂಟಪ, ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here