ಗದಗ: ‘ಅಲ್ಲಮಪ್ರಭು ನಿತ್ಯ ಬೆಡಗು; ನಿತ್ಯ ಬೆರಗು. ಅವರ ವಚನಗಳು ಕಬ್ಬಿಣದ ಕಡಲೆ ಇದ್ದಂತೆ. ಅರ್ಥಮಾಡಿಕೊಳ್ಳಬೇಕಾದರೆ ಸ್ವಲ್ಪ ಕಷ್ಟ. ಆದರೆ, ಒಳಹೊಕ್ಕರೆ ಬೆಳಕಿನ ಪುಂಜ. ಸಕ್ಕರೆಯನ್ನು ವರ್ಣಿಸಬಹುದು. ಆದರೆ, ಸಿಹಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ.
ಅಲ್ಲಮಪ್ರಭು ಅಧ್ಯಾತ್ಮದ ವಿಚಾರಗಳನ್ನು ಆ ನಿಟ್ಟಿನಲ್ಲೇ ಹೇಳಿದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.ಪಂಚಾಕ್ಷರಿ ನಗರದಲ್ಲಿರುವ ಶ್ರೀ ಸಿದ್ಧಲಿಂಗ ಅರಿವಿನ ಮನೆಯಲ್ಲಿ ಶನಿವಾರ ನಡೆದ ‘ಅಲ್ಲಮಪ್ರಭು’ ದ್ವಿತೀಯ ಮುದ್ರಣದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಜಗತ್ತಿನ ಎಲ್ಲ ತಾತ್ವಿಕರನ್ನು ಒಂದೆಡೆ ಸೇರಿಸಿ ಸಭೆ ನಡೆಸಿದರೆ ಅದರ ಅಧ್ಯಕ್ಷ ಸ್ಥಾನ ವಹಿಸುವ ತಾಕತ್ತು ಇರುವುದು ಅಲ್ಲಮಪ್ರಭುವಿಗೆ ಮಾತ್ರ. ಇಂತಹ ಸಾಧಕರ ಬಗ್ಗೆ ಒಂದು ಪುಸ್ತಕ ಬರೆದುಕೊಡುವಂತೆ ಗೆಳೆಯ ಶಾಂತವೀರ ಕೋರಿಕೊಂಡಾಗ ಅಳುಕಿನಿಂದಲೇ ಒಪ್ಪಿದೆ. ‘ಅಲ್ಲಮಪ್ರಭು’ ಪುಸ್ತಕ ರಚನೆ ನನ್ನಿಂದ ಆಗುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ನಾನು ಪ್ರಯತ್ನಿಸಿದೆ. ಅಲ್ಲಮಪ್ರಭು ತಾನೇ ಕೂರಿಸಿ ಬರೆಯಿಸಿಬಿಟ್ಟರು’ ಎಂದು ಹೇಳಿದರು.
‘ಓದುವ ಸಂಸ್ಕಾರ ಬೆಳೆಸುವುದು, ಓದುವ ಸಂಸ್ಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪುಸ್ತಕವನ್ನು ಓದುವ ಮೂಲಕವೇ ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದು ಕೂಡ ಈ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು’ ಎಂದು ಅವರು ಹೇಳಿದರು.ಶೇಖಣ್ಣ ಕವಳಿಕಾಯಿ ಅವರು ‘ಅಲ್ಲಮಪ್ರಭು’ ಪುಸ್ತಕವನ್ನು ಓದುವ ಮೂಲಕ ದ್ವಿತೀಯ ಮುದ್ರಣವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಆಸಕ್ತ ಓದುಗರು, ಸಾಹಿತಿಗಳು ಪುಸ್ತಕ ಓದಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೊಸತನದ ಮೆರುಗು ನೀಡಿದರು.
ಕ್ಷಮಾ ವಸ್ತ್ರದ, ಸಾಹಿತಿ ಬಸವರಾಜ ಸೂಳಿಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.